ADVERTISEMENT

ಸಾರ್ವಜನಿಕ ಹಣವನ್ನು ಕೊಳ್ಳೆ ಹೊಡೆದ ಬಿಜೆಪಿ ಸರ್ಕಾರ - ರಾಜ್ಯಪಾಲರ ಕಟು ಟೀಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 10:55 IST
Last Updated 3 ಜೂನ್ 2013, 10:55 IST
ಜಂಟಿ ಸದನವನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದ ರಾಜ್ಯಪಾಲ ಹೆಚ್. ಆರ್. ಭಾರದ್ವಾಜ್ - ಪಿಟಿಐ ಚಿತ್ರ
ಜಂಟಿ ಸದನವನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದ ರಾಜ್ಯಪಾಲ ಹೆಚ್. ಆರ್. ಭಾರದ್ವಾಜ್ - ಪಿಟಿಐ ಚಿತ್ರ   

ಬೆಂಗಳೂರು (ಪಿಟಿಐ): ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಸೋಮವಾರ ಭಾಷಣ ಮಾಡಿದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಹಿಂದಿನ ಸರ್ಕಾರವು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆಯಿತು ಎಂದು ಕಟುವಾಗಿ ಟೀಕಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರಗತಿ ಕುಂಠಿತಗೊಂಡಿದೆ. ಆದರೆ ಇದೇ ಸಮಯದಲ್ಲಿ ಹಗರಣಗಳು ಹಾಗೂ ಭ್ರಷ್ಟಾಚಾರ ಹೆಚ್ಚಾಗಿ ರಾಜಕೀಯ ಪಕ್ಷಗಳು ಪ್ರಜೆಗಳ ನಂಬಿಕೆಯನ್ನು ಕಳೆದುಕೊಳ್ಳುವಂತಾಯಿತು ಎಂದು ರಾಜ್ಯಪಾಲರು ಹೇಳಿದರು.

ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ನಿಂತೇ ಹೋಗಿದ್ದವು, ಸಾರ್ವಜನಿಕರ ಹಣ ವನ್ನು ನಿರಂತರವಾಗಿ ಕೊಳ್ಳೆ ಹೊಡೆಯಲಾಯಿತು ಎಂದು ಬಿಜೆಪಿ ಪಕ್ಷವನ್ನು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.

ಆದರೆ ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ಜನರಲ್ಲಿ ಸ್ವಚ್ಛ ಆಡಳಿತ ನೀಡುವ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದ ಅವರು `ನನ್ನ ಸರ್ಕಾರವು ಸ್ವಚ್ಛ, ಪರಿಣಾಮಕಾರಿ ಹಾಗೂ ಪಾರದರ್ಶಕ ಆಡಳಿತ ನೀಡುತ್ತದೆ' ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಟೀಕೆ: ರಾಜ್ಯಪಾಲರ ಭಾಷಣದಿಂದ ಕೆರಳಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 2ಜಿ ಹಾಗೂ ಕಲ್ಲಿದ್ದಲು ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರ ಹಾಗೂ ಹಗರಣಗಳ ಕುರಿತು ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.