ADVERTISEMENT

ಸಾಹಿತಿ ನಿರುಪಮಾ ನಿಧನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST
ಸಾಹಿತಿ ನಿರುಪಮಾ
ಸಾಹಿತಿ ನಿರುಪಮಾ   

ಬೆಂಗಳೂರು: ಹಿರಿಯ ಲೇಖಕಿ ಡಾ.ನಿರುಪಮಾ (82) ಅವರು ಗುರುವಾರ ಬೆಳಿಗ್ಗೆ ನಿಧನರಾದರು. ಅವರು ಕೆಲ ಕಾಲದಿಂದ ಗಂಟಲಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆ ನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು.

ಕಥೆ, ಕಾದಂಬರಿ, ಚರಿತ್ರೆ, ಕಾನೂನು ಹಾಗೂ ಮಕ್ಕಳ ಸಾಹಿತ್ಯ ಸೇರಿದಂತೆ ಬಹುತೇಕ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದ ಅವರು, 118ಕ್ಕೂ ಹೆಚ್ಚು ಕೃತಿಗಳನ್ನು ರಚಿಸ್ದ್ದಿದರು. ಕನ್ನಡದ ಜತೆಗೆ ತೆಲುಗು, ಬಂಗಾಳಿ, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳ ಮೇಲೂ ಅವರಿಗೆ ಹಿಡಿತವಿತ್ತು. ಈ ಭಾಷೆಗಳಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ವಿವಿಧ ಭಾರತೀಯ ಭಾಷೆಗಳಿಗೆ ಅವರು ಹಲವು ಕೃತಿಗಳನ್ನು ಅನುವಾದಿಸ್ದ್ದಿದರು.

`ಸಾಹಿತ್ಯದ ಸೊಬಗು', `ರಾಷ್ಟ್ರೀಯತೆ ಮತ್ತು ಕಾವ್ಯ', `ಸ್ವಾತಂತ್ರ್ಯಾನಂತರದ ಭಾರತೀಯ ಲೇಖಕಿಯರು' ಅವರ ಇತ್ತೀಚಿನ ಕೃತಿಗಳಾಗಿದ್ದು, ಅವರ `ಮಹಾಭಾರತ' ಕೃತಿ ಹೆಚ್ಚು ಜನಪ್ರಿಯವಾಗಿದೆ. 1974ರಲ್ಲಿ `ಆರತಿ ಪಬ್ಲಿಕೇಶನ್' ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ್ದ ಅವರು ಹೊಸ ಲೇಖಕಿಯರ ಕೃತಿಗಳನ್ನು ಹೊರತಂದು, ಪ್ರೋತ್ಸಾಹ ನೀಡುತ್ತಿದ್ದರು. 1999ರಲ್ಲಿ ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಂದ `ದಕ್ಷಿಣ ಭಾರತದ ಅತ್ಯುತ್ತಮ ಮಹಿಳಾ ಪ್ರಕಾಶಕಿ' ಪ್ರಶಸ್ತಿ ಪಡೆದಿದ್ದರು.

ಮಕ್ಕಳ ಸಾಹಿತ್ಯದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಅವರು, `ಧಾರವಾಡ ಮಕ್ಕಳ ಮನೆ' ಪ್ರಶಸ್ತಿ, ಯುನಿಸೆಫ್‌ನ `ಮಕ್ಕಳ ಸಾಹಿತ್ಯ ಪ್ರಶಸ್ತಿ'ಗಳನ್ನು ತಮ್ಮದಾಗಿಸಿಕೊಂಡಿದ್ದರು. ರಾಜ್ಯೋತ್ಸವ ಪ್ರಶಸ್ತಿ, `ಅತ್ತಿಮಬ್ಬೆ' ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ `ಅನುಪಮಾ' ಪ್ರಶಸ್ತಿ, `ಲಿಪಿ ಪ್ರಾಜ್ಞೆ' ಪ್ರಶಸ್ತಿ, ಮಿಥಿಕ್ ಸೊಸೈಟಿಯ `ಸಂಶೋಧಕಿ' ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿದೆ. ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳು ಇದ್ದಾರೆ.
ನಿರುಪಮಾ ಅವರ ನಿಧನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.