ಬೆಂಗಳೂರು: ‘ಕಾಂಗ್ರೆಸ್ನವರ ಜನ್ಮ ಜಾಲಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಯಡಿಯೂರಪ್ಪ ಅವರ ಜನ್ಮವನ್ನು ಇಡೀ ದೇಶವೇ ಜಾಲಾಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
‘ಕಾಂಗ್ರೆಸ್ನವರು ತಪ್ಪು ಮಾಡಿದ್ದರೆ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳುವುದು ಬಿಟ್ಟು, ಅವರು ಮಾಡಿರುವ ಭ್ರಷ್ಟಾಚಾರಗಳಿಗೆ ಕುಂಟು ನೆಪವಾಗಿ ಕಾಂಗ್ರೆಸ್ ಪಕ್ಷದ ಹೆಸರು ಬಳಸುವುದನ್ನು ಇನ್ನಾದರೂ ನಿಲ್ಲಿಸಬೇಕು’ ಎಂದು ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.
ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡುವ ಸಲುವಾಗಿಯೇ ವಾಮ ಮಾರ್ಗದ ಮೂಲಕ ಅಧಿಕಾರದಲ್ಲಿ ಮುಂದುವರಿದಿದೆ. ಲೂಟಿ ಮಾಡುವ ಕಾಯಕದಲ್ಲಿ ತೊಡಗಿದೆ. ಯಡಿಯೂರಪ್ಪ ಅವರ ಮಾತುಗಳಲ್ಲಿ ಫ್ಯಾಸಿಸ್ಟ್ ಧೋರಣೆ ವ್ಯಕ್ತವಾಗಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು, ಹಿಡಿದ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂದು ಹಿಟ್ಲರ್ ಮಾದರಿಯಲ್ಲಿ ಇದಕ್ಕೆ ಬೇಕಾದ ಹಣಬಲ ಮತ್ತು ತೋಳ್ಬಲವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಮತ್ತು ಯಡಿಯೂರಪ್ಪ ಅವರ ಬಂಡವಾಳ ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದ ಪ್ರತಿಯೊಂದು ಮನೆಗೂ ಗೊತ್ತಿದೆ.
ಆಧಾರ ರಹಿತ ಆರೋಪ ಮಾಡುತ್ತಾರೆ ಎನ್ನುವ ಯಡಿಯೂರಪ್ಪ ಅವರು, ಅಧಿಕಾರಕ್ಕೆ ಬಂದ ನಂತರದ ಸಾಕ್ಷ್ಯಾಧಾರಗಳು, ಸರ್ಕಾರದ ಬಳಿ ಇರುವ ಕಡತಗಳು ಹಾಗೂ ಅವರ ಕುಟುಂಬದವರ ಹೆಸರಿನಲ್ಲಿ ಮಾಡಿರುವ ಆಸ್ತಿಪಾಸ್ತಿಯನ್ನು ನೋಡಿಕೊಳ್ಳಲಿ, ಆಗ ಸತ್ಯಾಂಶ ಏನು ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.