ಗದಗ: `ನಾವು ಬದರಿನಾಥ ಮತ್ತು ಕೇದಾರಕ್ಕೆ ಭೇಟಿ ನೀಡಲಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದೇವೆ. ಆತಂಕ ಪಡುವ ಅವಶ್ಯಕತೆ ಇಲ್ಲ. ವದಂತಿಗಳಿಗೆ ಕಿವಿಗೊಡಬೇಡಿ....' - ಹೀಗೆ ಹೇಳಿದವರು ಉತ್ತರ ಭಾರತ ಪ್ರವಾಸದಲ್ಲಿರುವ ಗದುಗಿನ ನೀಲಮ್ಮ ತಾಯಿ ಮಠದ ಮುಖ್ಯಸ್ಥೆ ನೀಲಮ್ಮ ತಾಯಿ ಅಸುಂಡಿ.
`ಗದಗ, ಹೊಸಪೇಟೆ, ಕೊಪ್ಪಳ, ಬಳ್ಳಾರಿಯ ಭಕ್ತರೊಂದಿಗೆ ಎರಡು ಟೂರಿಸ್ಟ್ ಬಸ್ಗಳಲ್ಲಿ (ಒಟ್ಟು ನೂರು ಮಂದಿ) ಜೂನ್ 3ರಂದು ಉತ್ತರ ಭಾರತ ಪ್ರವಾಸಕ್ಕೆ ಹೊರಟೆವು. ಉತ್ತರಾಖಂಡದಲ್ಲಿ ಪ್ರವಾಹ ಬಂದ ವಿಷಯ ತಿಳಿಯಿತು. ರಸ್ತೆ ಮಾರ್ಗ ಬಂದ್ ಆಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆ ಸ್ಥಳಗಳಿಗೆ ಭೇಟಿ ನೀಡುವುದನ್ನು ರದ್ದುಗೊಳಿಸಲಾಯಿತು. ನಂತರ ವೈಷ್ಣವಿ ದೇವಾಲಯ, ಅಮೃತಸರ ಕಡೆ ಪ್ರಯಾಣ ಹೊರಟೆವು' ಎಂದು ನೀಲಮ್ಮ ಅವರು `ಪ್ರಜಾವಾಣಿ'ಗೆ ತಿಳಿಸಿದರು.
`ನಾವೆಲ್ಲ ತೊಂದರೆಗೆ ಸಿಲುಕಿಕೊಂಡಿದ್ದೇವೆ ಎಂಬ ಪತ್ರಿಕಾ ವರದಿ ನೋಡಿ ಬೆಳಿಗ್ಗೆಯಿಂದಲೇ ಮೊಬೈಲ್ಗೆ ಕರೆ ಬರುತ್ತಿವೆ. ಎಲ್ಲರೂ ಸುರಕ್ಷಿತವಾಗಿ ಸದ್ಯ ದೆಹಲಿಯಲ್ಲಿ ಇದ್ದೇವೆ. ಯಾರೂ ಆತಂಕ ಪಡಬೇಡಿ. ವದಂತಿಗಳಿಗೆ ಕಿವಿಗೊಡಬೇಡಿ' ಎಂದು ಭಕ್ತರಿಗೆ ಮನವಿ ಮಾಡಿದರು.
`ದೆಹಲಿಯಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಅವರೊಂದಿಗೆ ಮಾತನಾಡಿ ಸಂಸತ್ಗೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ಕೋರಿಕೊಂಡೆವು. ಇಪ್ಪತ್ತು ಮಂದಿಗೆ ಪಾಸ್ ವ್ಯವಸ್ಥೆ ಮಾಡಿದ್ದಾರೆ. ಬುಧವಾರ ಸಂಸತ್ಗೆ ಭೇಟಿ ನೀಡಲಾಗುವುದು. ನಂತರ ಮೌಂಟ್ ಅಬು, ಜೈಪುರ, ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ, ಜುಲೈ 12ರಂದು ಗದುಗಿಗೆ ಬರುತ್ತೇವೆ' ಎಂದು ನೀಲಮ್ಮ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.