ಮೈಸೂರು: `ಕಾನೂನು ಹಾಗೂ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ಕುಮಾರ್ ಪರವಾಗಿಲ್ಲ ಎಂದುಕೊಂಡಿದ್ದೆವು. ಆದರೆ, ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನ ಪಡೆಯುವ ಮೂಲಕ ತಮ್ಮ ಬಣ್ಣ ಬಯಲು ಮಾಡಿದ್ದಾರೆ~ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.
`ಕಾನೂನು ಸಚಿವರಿಗೆ ಕಾನೂನು ಜ್ಞಾನ ಇರುತ್ತದೆ. ಕಾನೂನು ಬಾಹಿರವಾಗಿ ಅಕ್ರಮ ಎಸಗುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ. ಬಿಜೆಪಿಯ ಇತರ ಸಚಿವರಂತೆ ಇವರೂ ಅಕ್ರಮದಲ್ಲಿ ಭಾಗಿಯಾಗುವ ಮೂಲಕ ಹಗರಣದಲ್ಲಿ ಸಿಲುಕಿದ್ದಾರೆ. ಆದಾಗ್ಯೂ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸ್ವಾಗತಾರ್ಹ~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ಇಡೀ ಸರ್ಕಾರವೇ ಹಗರಣದಲ್ಲಿ ಮುಳುಗಿ ಹೋಗಿದೆ. ಪ್ರತಿಯೊಬ್ಬ ಸಚಿವರೂ ಒಂದಿಲ್ಲೊಂದು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ ಈ ಕೂಡಲೇ ಎಲ್ಲ ಸಚಿವರೂ ರಾಜೀನಾಮೆ ನೀಡಬೇಕು. ರಾಜ್ಯದ ಜನತೆಯ ಕ್ಷಮೆಯಾಚಿಸಿ, ಚುನಾವಣೆಗೆ ಹೋಗಬೇಕು~ ಎಂದು ಸಲಹೆ ನೀಡಿದರು.
ರಾಜೀನಾಮೆ ಸ್ವಾಗತಾರ್ಹ: `ಸುರೇಶ್ಕುಮಾರ್ ಒಬ್ಬ ಸಜ್ಜನ ರಾಜಕಾರಣಿ. ಉತ್ತಮ ಸಂಸದೀಯ ಪಟು. ಇಂತಹ ಸರ್ಕಾರದಲ್ಲಿ ಇಷ್ಟು ದಿನ ಮಂತ್ರಿ ಆಗಿದ್ದೇ ಆಶ್ಚರ್ಯ. ಆರೋಪ ಕೇಳಿ ಬಂದ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸ್ವಾಗತಾರ್ಹ~ ಎಂದು ಸಂಸದರಾದ ಆರ್.ಧ್ರುವನಾರಾಯಣ, ಎಚ್. ವಿಶ್ವನಾಥ್, ಶಾಸಕ ಎಚ್.ಎಸ್.ಮಹದೇವಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
`ಆರೋಪ ಬಂದ ತಕ್ಷಣವೇ ಸಚಿವರು ರಾಜೀನಾಮೆ ಸಲ್ಲಿಸಿರುವುದು ಅವರ ನೈತಿಕತೆ ತೋರಿಸಿದೆ. ಇದು ಇತರರಿಗೂ ಮಾದರಿ ಆಗಬೇಕು. ಆರೋಪ ಕೇಳಿ ಬಂದಾಗ `ಜಗ್ಗದೆ ಬಗ್ಗದೆ~ ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ಬಯಸುವ ರಾಜಕಾರಣಿಗಳ ಮಧ್ಯೆ ಸುರೇಶ್ಕುಮಾರ್ ಆದರ್ಶವಾಗಿದ್ದಾರೆ~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.