ಬೆಂಗಳೂರು: ‘ನಮ್ಮಲ್ಲಿ ಸೂಟ್ಕೇಸ್ ತೆಗೆದುಕೊಳ್ಳುತ್ತಿದ್ದವರು ಪಕ್ಷ ಬಿಟ್ಟು ಹೋಗಿದ್ದಾರೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
‘ಪಕ್ಷದಲ್ಲಿ ಸೂಟ್ಕೇಸ್ ಪಡೆಯುತ್ತಿದ್ದುದು ನಿಜ. ಅವರು ಮುಂದಿನ ಸಾಲಿನಲ್ಲಿ ಕೂರುತ್ತಿದ್ದುದ್ದೂ ನಿಜ. ಆದರೆ, ಈಗ ಅವರು ಪಕ್ಷದಲ್ಲಿ ಇಲ್ಲ. ಪ್ರಜ್ವಲ್ ರೇವಣ್ಣ ಇವರ ಬಗ್ಗೆಯೇ ಹೇಳಿರಬಹುದು’ ಎಂದು ಕುಮಾರಸ್ವಾಮಿ ಬಂಡಾಯ ಶಾಸಕರಿಗೆ ಕುಟುಕಿದರು.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಸೂಟ್ಕೇಸ್ ವಿಚಾರವಾಗಿ ಪ್ರಜ್ವಲ್ ಯಾರನ್ನು ಕುರಿತು ಮಾತನಾಡಿದ್ದಾನೆ ಎಂಬುದು ಗೊತ್ತಿಲ್ಲ. ಆ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ಗೊತ್ತಿಲ್ಲ’ ಎಂದರು.
‘ಮಾಧ್ಯಮಗಳಲ್ಲಿ ಬಂದ ವಿಷಯವನ್ನು ಗಮನಿಸಿದ್ದೇನೆ. ಅದರ ಬಗ್ಗೆ ಚರ್ಚೆ ಮಾಡೋದು ಅನವಶ್ಯಕ. ನನ್ನಲ್ಲಿ ಕ್ಷಮೆ ಕೇಳುವಂತಹ ತಪ್ಪು ಅವನೇನೂ ಮಾಡಿಲ್ಲ. ನನ್ನನ್ನು ಕುರಿತು ಮಾತನಾಡಿದ್ದಾಗಿ ಅವನು ಹೇಳಿಲ್ಲ ’ಎಂದೂ ಅವರು ಸ್ಪಷ್ಟಪಡಿಸಿದರು.
‘ಎಚ್ಡಿಕೆ ಚರ್ಚೆಗೆ ಬರಲಿ’
‘ಕುಮಾರಸ್ವಾಮಿ ಚರ್ಚೆಗೆ ಬಂದರೆ, ಯಾರು, ಯಾರಿಗೆ, ಯಾವಾಗ ಎಷ್ಟು ಸೂಟ್ಕೇಸ್ ನೀಡಿದ್ದಾರೆ ಎಂಬುದನ್ನು ಹೇಳುತ್ತೇನೆ’ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.
‘ಸೂಟ್ಕೇಸ್ ವಿಚಾರ ಕುಮಾರಸ್ವಾಮಿ ಮತ್ತು ಅವರ ಕುಟುಂಬದವರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.