ADVERTISEMENT

ಹಕ್ಕುಪತ್ರಕ್ಕಾಗಿ ಮರಗಳ ಹನನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ಹೊಸನಗರ ತಾಲ್ಲೂಕು ಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದುಮ್ಮ ಗ್ರಾಮದ ಗೋಮಾಳದಲ್ಲಿರುವ ಮರಗಳನ್ನು ಕಡಿತಲೆ ಮಾಡಿ ಒತ್ತುವರಿ ಮಾಡಿರುವುದು
ಹೊಸನಗರ ತಾಲ್ಲೂಕು ಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದುಮ್ಮ ಗ್ರಾಮದ ಗೋಮಾಳದಲ್ಲಿರುವ ಮರಗಳನ್ನು ಕಡಿತಲೆ ಮಾಡಿ ಒತ್ತುವರಿ ಮಾಡಿರುವುದು   

ಹೊಸನಗರ: ಗೋಮಾಳ, ಗೋಮುಫತ್ತಿನಲ್ಲಿ ಬಗರ್‌ಹುಕುಂ ಮಂಜೂರು ಮಾಡದಂತೆ ಇದ್ದ ಹೈಕೋರ್ಟ್ ತಡೆಯಾಜ್ಞೆ ಕಾರಣ ತಾಲ್ಲೂಕಿನಾದ್ಯಂತ ಗೋಮಾಳದಲ್ಲಿರುವ ಸಮೃದ್ಧ ಮರಗಳನ್ನು ಕಡಿದು ಒತ್ತುವರಿಯ ಪ್ರಮಾಣ ಹೆಚ್ಚಾಗುತ್ತಿದೆ.

ಮಲೆನಾಡಿನ ಗೋಮಾಳ, ಗೋಮುಫತ್ತು (ಗೋವಿಗಾಗಿ ದಾನ ನೀಡಿದ ಭೂಮಿ) ಎಂದರೆ ಅದು ಬೋಳು ಗುಡ್ಡವಾಗಲಿ, ಹುಲ್ಲುಗಾವಲಾಗಲಿ ಅಲ್ಲ; ಬೆಲೆ ಬಾಳುವ ಮರ, ಗಿಡ, ಬಿದಿರು ಮೆಳೆಗಳ ನಡುವೆ ಇರುವ ಗೋವುಗಳ ಮೇವಿನ ತಾಣವಾಗಿದೆ.

ಗೋಮಾಳದಲ್ಲಿ ಅಕ್ರಮವಾಗಿ ಬಗರ್‌ಹುಕುಂ ಸಾಗುವಳಿ ಮಾಡಿದವರಿಗೆ ಭೂಮಿ ಹಕ್ಕು ಕೊಡುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಘೋಷಿಸಿದ್ದಾರೆ. ಇದರ ಪರಿಣಾಮ ಮಲೆನಾಡಿನಾದ್ಯಂತ ಗೋಮಾಳ ಒತ್ತುವರಿ ಮಾಡಿ, ಅಲ್ಲಿರುವ ಮರಗಳನ್ನು ಅಕ್ರಮವಾಗಿ ಕಡಿಯುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂಬುದು ಅರಣ್ಯ ಇಲಾಖೆಯ ಅಳಲಾಗಿದೆ.

ADVERTISEMENT

ದುಮ್ಮ ಎಂಬಲ್ಲಿನ ಸರ್ವೆ ನಂಬರ್‌ 35ರಲ್ಲಿ ಗೋಮಾಳದಲ್ಲಿರುವ ಮರಗಳನ್ನು ಅಕ್ರಮವಾಗಿ ಕಡಿದು ಕಂದಕ ತೋಡಿ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ತಾಲ್ಲೂಕಿನ ಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಹೆಬೈಲು ರಾಜುಗೌಡ, ಶಿವಶಂಕರ ಹಾಗೂ ಪಾಯಪ್ಪ ಗೌಡ ಎಂಬುವವರ ವಿರುದ್ಧ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಿದೆ.

ಕೇವಲ ಕೃಷಿ ಮಾಡುವುದಕ್ಕಾಗಿ ಅರಣ್ಯ ನಾಶ ಮಾಡಿದರೆ, ಗೋವಿಗೆ ಕನಿಷ್ಠ ಮೇವಿಗೆ ಜಾಗವಿಲ್ಲದಂತಾಗುತ್ತದೆ. ಪಶುಸಂತತಿ ಮೇಲೆ ಇದರ ಪರಿಣಾಮ ಬೀರಲಿದೆ ಎಂಬುದು ಪರಿಸರ ಪ್ರೇಮಿಗಳ ಕೂಗು.

ಮರಗಳು ಇರುವ ಗೋಮಾಳವನ್ನು ಕೃಷಿಭೂಮಿಯಾಗಿ ಬಳಕೆ ಮಾಡ ಲು ತಾಲ್ಲೂಕು ಬಗರ್‌ಹುಕುಂ ಸಮಿತಿಯು ಮಂಜೂರು ಮಾಡಬಾರದು. ಇದರಿಂದ ಪರಿಸರದ ಜತೆಗೆ ಜಾನುವಾರಿಗೆ ಮೇವಿನ ಪ್ರಮಾಣ ಕಡಿಮೆ ಆಗುತ್ತದೆ. ಗೋ ಸಂಪತ್ತು ಸಹ ಇಳಿಮುಖವಾಗುತ್ತದೆ ಎಂಬುದು ತಾಲ್ಲೂಕು ಜನ ಸಂಗ್ರಾಮ ಪರಿಷತ್ತಿನ ಸಂಚಾಕ ಗಿರೀಶ ಆಚಾರಿ ಅವರ ಆತಂಕವಾಗಿದೆ.

ಯಾವುದೇ ದಾಖಲೆ ಇಲ್ಲದೆ ಅನೇಕ ವರ್ಷಗಳಿಂದ ಕೃಷಿ ಸಾಗುವಳಿ ಮಾಡಿದಲ್ಲಿ ಮಾತ್ರ ಬಗರ್‌ಹುಕುಂ ಜಮೀನು ಮಂಜೂರು ಮಾಡಬಹುದು. ಆದರೆ ಕಾಡು, ಗೋಮಾಳದಲ್ಲಿ ಸಾಗುವಳಿ ಇಲ್ಲದೆ ದಿಢೀರ್ ಎಂದು ಅಡಿಕೆ, ತೆಂಗಿನ ದೊಡ್ಡ ಸಸಿಗಳನ್ನುನೆಟ್ಟು ಫೋಟೊ ತೆಗೆಸಿ, ಅಕ್ರಮ ಮಾಡುವವರ ಸಂಖ್ಯೆಗೆ ಸಮಿತಿ ಕಡಿವಾಣ ಹಾಕಬೇಕಿದೆ ಎಂದು ಅವರು ಮನವಿ ಮಾಡುತ್ತಾರೆ.

–ಪಿ.ಎನ್. ನರಸಿಂಹಮೂರ್ತಿ

**

ಯಾವುದೇ ಗೋಮಾಳದಲ್ಲಿರುವ ಮರಗಳ ರಕ್ಷಣೆಗೆ ಅರಣ್ಯ ಇಲಾಖೆ ಕಟಿಬದ್ಧವಾಗಿದೆ. ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
–ಜಯೇಶ್ ಹೊಸನಗರ ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.