ADVERTISEMENT

ಹತ್ತು ನಗರಗಳಲ್ಲಿ ರಾಜೀವ್ ಆವಾಸ್‌

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಬೆಂಗಳೂರು: ಪರಿಷ್ಕೃತ ಮಾರ್ಗಸೂಚಿ ಪ್ರಕಾರ ರಾಜ್ಯದ ಹತ್ತು ಪ್ರಮುಖ ನಗರಗಳಲ್ಲಿ ರಾಜೀವ್‌ ಆವಾಸ್‌ ಯೋಜನೆಯಡಿ ಕೊಳೆಗೇರಿಗಳಿಗೆ ಮೂಲ­ಸೌಕರ್ಯ ಕಲ್ಪಿಸುವ ಪ್ರಸ್ತಾವಕ್ಕೆ ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಯೋಜನೆಯಡಿ ₨ 10,752 ಕೋಟಿ ವೆಚ್ಚ ಮಾಡುವ ಉದ್ದೇಶವಿದೆ.

ಐದು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ನಗರ ಮತ್ತು ಪಟ್ಟಣ­ಗಳಲ್ಲಿ ಈ ಯೋಜನೆಯಡಿ ಕೊಳೆಗೇರಿ­ಗಳಿಗೆ ಮೂಲಸೌಕರ್ಯ ಕಲ್ಪಿಸಲು ಅವಕಾಶ ಇದೆ. ಬೆಂಗಳೂರು, ಮಂಗ­ಳೂರು, ಹುಬ್ಬಳ್ಳಿ–ಧಾರವಾಡ, ತುಮ­ಕೂರು, ದಾವಣಗೆರೆ, ಬಳ್ಳಾರಿ, ಮೈಸೂರು, ಬೆಳಗಾವಿ, ಶಿವಮೊಗ್ಗ ಮತ್ತು ಗುಲ್ಬರ್ಗ ನಗರಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಸಂಪುಟ ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, ‘ಕೊಳೆಗೇರಿಗಳಿಗೆ ವಸತಿ, ರಸ್ತೆ, ಒಳಚರಂಡಿ, ಶಾಲೆ, ಅಂಗನವಾಡಿ ಮತ್ತಿತರ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ರಾಜೀವ್‌ ಆವಾಸ್‌ ಯೋಜನೆಯ ಅಡಿಯಲ್ಲಿ ಅನುದಾನ ನೀಡುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಮತ್ತು ನಗರ ಸ್ಥಳೀಯ ಸಂಸ್ಥೆ­ಗಳ ಸಹಯೋಗದಲ್ಲಿ ಯೋಜನೆ­ಅನು­ಷ್ಠಾನ­­ಗೊಳಿಸಲಾಗುತ್ತದೆ’ ಎಂದರು.

ಎರಡನೇ ಹಂತಕ್ಕೆ ಪ್ರಸ್ತಾವ: ಐದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳಿಗೂ ರಾಜೀವ್‌ ಆವಾಸ್‌ ಯೋಜನೆಯಡಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಆದರೆ, ರಾಜ್ಯವು ಹೆಚ್ಚಿನ ಪಾಲನ್ನು ಭರಿಸಬೇಕಾಗುತ್ತದೆ ಎಂದು ಕೇಂದ್ರವು ತಿಳಿಸಿದೆ. 25 ಪಟ್ಟಣಗಳಲ್ಲಿ ಯೋಜನೆ ಜಾರಿಗೆ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಚಿತ್ರದುರ್ಗ, ಕೋಲಾರ, ರಾಬರ್ಟ್‌­ಸನ್‌ ಪೇಟೆ, ಭದ್ರಾವತಿ, ಚಿಕ್ಕಮಗ­ಳೂರು, ಹಾಸನ, ಮಂಡ್ಯ, ಉಡುಪಿ, ಬಾಗಲಕೋಟೆ, ವಿಜಾಪುರ, ಗದಗ, ರಾಣೆ­ನ್ನೂರು, ಬೀದರ್‌,ರಾಯಚೂರು, ಗಂಗಾವತಿ, ಕಾರವಾರ, ಯಾದ­­ಗಿರಿ ಇವುಗಳಲ್ಲಿ ಸೇರಿದೆ ಎಂದರು.

ಟೆಂಡರ್‌ಗೆ ಒಪ್ಪಿಗೆ:ಗುಲ್ಬರ್ಗ, ತುಮ­ಕೂರು, ಬೆಳಗಾವಿ ಮತ್ತು ರಾಯ­ಚೂರು ಜಿಲ್ಲೆಗಳ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಮಂತ್ರಿ­ಯವರ ನಗರೋತ್ಥಾನ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳ ಟೆಂಡರ್‌ಗೆ ಸಂಪುಟ ಒಪ್ಪಿಗೆ ನೀಡಿದೆ.

ಇತರೆ ನಿರ್ಣಯಗಳು
227 ಜಾನುವಾರು ಅಭಿವೃದ್ಧಿ ಅಧಿಕಾರಿಗಳಿಗೆ ₨ 100 ಭತ್ಯೆ ಹೆಚ್ಚಳ.

ಸಾವಿರ ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪನೆಗಳ ಪರಿಷ್ಕೃತ ಅಂದಾಜಿಗೆ (₨ 179ಕೋಟಿ)  ಒಪ್ಪಿಗೆ.

ಮಾರ್ಗ್‌ ಕನ್‌ಸ್ಟ್ರಕ್ಷನ್ಸ್‌ಗೆ ನೀಡಿದ್ದ ವಿಜಾಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಗುತ್ತಿಗೆ ರದ್ದು.

ವಿಧಾನಸಭೆಗೆ ಒಬ್ಬ ಆಂಗ್ಲೋ ಇಂಡಿಯನ್‌ ಸದಸ್ಯನ ನಾಮಕರಣಕ್ಕೆ ಮುಖ್ಯಮಂತ್ರಿಗೆ ಅಧಿಕಾರ.

ಕಾರ್ಮಿಕರಿಗೆ ಕೌಶಲ ತರಬೇತಿ ನೀಡಲು ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ನಿರ್ಮಾಣ ಅಕಾಡೆಮಿ ಸ್ಥಾಪನೆ.

ಕಬ್ಬಿಗೆ ದರ ನಿಗದಿ ಸಂಬಂಧ ಅಫಜಲಪುರದಲ್ಲಿ 2011ರಲ್ಲಿ ರಸ್ತೆ ತಡೆ ನಡೆಸಿದ್ದ ರೈತರ ವಿರುದ್ಧ ದಾಖಲಿಸಿದ್ದ ಮೊಕದ್ದಮೆ ವಾಪಸು

ದಾವಣಗೆರೆ ವಿವಿ, ವಿಜಾಪುರ ಮಹಿಳಾ ವಿವಿಗೆ ತಲಾ ₨ 5 ಕೋಟಿ ಅನುದಾನ.

ಗದಗದಲ್ಲಿ ಕರ್ನಾಟಕ ವಿ.ವಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆಗೆ ₨ 15 ಕೋಟಿ ಅನುದಾನ.

ಕರ್ನಾಟಕ ನೀರಾವರಿ ನಿಗಮಕ್ಕೆ ₨ 650 ಕೋಟಿ ಸಾಲ ಪಡೆಯಲು ಸರ್ಕಾರದ ಖಾತರಿ.

ಚಿಕ್ಕಬಳ್ಳಾಪುರ ಬಸ್‌ ನಿಲ್ದಾಣ ಕಾಮಗಾರಿ ₨ 8.63 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT