ಶಿವಮೊಗ್ಗ: ಸಮೀಪದ ಅಂದಾಸುರ ಗ್ರಾಮದಲ್ಲಿ ಮಂಗಳವಾರ ಹಳಿ ಪರೀಕ್ಷಾ ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕಿರ್ತನಾ (10) ಮೃತ ಬಾಲಕಿ.
ಸಾಗರದಿಂದ ಶಿವಮೊಗ್ಗದ ಕಡೆಗೆ ಚಲಿಸುತ್ತಿದ್ದ ಹಳಿ ಪರೀಕ್ಷೆ ರೈಲನ್ನು ಗಮನಿಸದ ಕಿರ್ತನಾ ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ತಕ್ಷಣವೇ ಆನಂದಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ.
ತಂದೆ–ತಾಯಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ತಾಯಿ ಗೀತಾ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ. ಬಾಲಕಿ ನಿಧನದ ಕಾರಣ ಶಾಲೆಗೆ ರಜೆ ನೀಡಲಾಗಿತ್ತು.
ಅಂದಾಸುರ ಗ್ರಾಮ ಹಾಗೂ ಶಾಲೆ ನಡುವೆ ರೈಲ್ವೆ ಹಳಿ ಇದ್ದು, ಸಾರ್ವಜನಿಕರ ಸಂಚಾರಕ್ಕೆ ಚಿಕ್ಕ ಕೆಳ ಸೇತುವೆ ನಿರ್ಮಿಸಲಾಗಿದೆ. ಆದರೂ, ನಡೆದು ಓಡಾಡುವವರು ಮಾತ್ರ ಹಳಿ ದಾಟಿಕೊಂಡೇ ಹೋಗಿ ಬರುತ್ತಾರೆ.
ಘಟನೆ ಕುರಿತು ರೈಲ್ವೆ ಇಲಾಖೆ ಹಾಗೂ ಪೋಲಿಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.