ADVERTISEMENT

ಹಾವೇರಿ ಅಗಡಿ ಅಕ್ಕಿ ಮಠದ ಚನ್ನಬಸವ ಸ್ವಾಮೀಜಿ ನಿಧನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ಅಥಣಿ: ಇಲ್ಲಿಯ ಗಚ್ಚಿನಮಠದ ಪದಚ್ಯುತ ಚರಪೀಠಾಧಿಪತಿ ಮತ್ತು ಹಾವೇರಿ ಜಿಲ್ಲೆಯ ಅಗಡಿ ಅಕ್ಕಿ ಮಠದ ಹಾಲಿ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ (67) ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕಳೆದ ತಿಂಗಳ 16 ರಂದು ಗಚ್ಚಿನಮಠದಿಂದ ಪದಚ್ಯುತಗೊಂಡ ನಂತರ ಅವರು ಮಠದ ಹಿಂಭಾಗದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ವಾಸ್ತವ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದರು. ಗುರುವಾರ ಬೆಳಿಗ್ಗೆ ಎಂದಿನಂತೆ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಲು ಶ್ರೀಮಠಕ್ಕೆ ಬಂದ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ಅವರನ್ನು ಅನುಯಾಯಿಗಳು ಇಲ್ಲಿನ ಅನ್ನಪೂರ್ಣ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸುವ ವೇಳೆಗೆ ರಕ್ತದ ಒತ್ತಡ ಕೂಡ ತೀವ್ರ ಕುಸಿದ ಕಾರಣ ಮೃತಪಟ್ಟರು ಎಂದು ಡಾ. ಎ.ಎ. ಪಾಂಗಿ ದೃಢಪಡಿಸಿದರು.

ಶ್ರೀಗಳ ನಿಧನದ ಸುದ್ದಿಯಿಂದಾಗಿ ಪಟ್ಟಣದಲ್ಲಿ ನೀರವ ಮೌನ ಆವರಿಸಿತ್ತು. ವರ್ತಕರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಗೌರವ ಸಲ್ಲಿಸಿದರು. ಭಕ್ತರಿಗೆ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲು ಪಾರ್ಥಿವ ಶರೀರವನ್ನು ಶ್ರೀಮಠದಲ್ಲಿ ಸಂಜೆವರೆಗೆ ಇಡಲಾಗಿತ್ತು.

ನಂತರ ಅಗಡಿಅಕ್ಕಿ ಮಠಕ್ಕೆ ಕೊಂಡೊಯ್ಯಲಾಯಿತು. ಶುಕ್ರವಾರ ಅಂತ್ಯ ಸಂಸ್ಕಾರ ಮಠದ ಆವರಣದಲ್ಲಿ ನಡೆಯಲಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಖಾಜಿ ಬೀಳಗಿ ಗ್ರಾಮದವರಾದ ಚನ್ನಬಸವ ಸ್ವಾಮೀಜಿ ಎರಡೂವರೆ ದಶಕಗಳಿಂದ ಅಗಡಿಅಕ್ಕಿ ಮಠದ ಪೀಠಾಧಿಪತಿಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.