ಗದಗ: ಬೆಟಗೇರಿ ಬಸ್ ನಿಲ್ದಾಣದ ಎದುರಿಗೆ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ಬಂದ್ಗೆ ಬೆಂಬಲ ಸೂಚಿಸಿದೆ.
ಹಾಸನ
ಹಾಸನ: ಶೀಘ್ರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರೆ ನೀಡಿರುವ ರಾಜ್ಯ ಬಂದ್ ಹಾಸನದಲ್ಲಿ ಸಂಪೂರ್ಣ ವಿಫಲವಾಗಿದೆ. ವಾಹನ ಸಂಚಾರ ಎಂದಿನಂತೆ ಇದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಪೆಟ್ರೋಲ್ ಬಂಕ್, ಅಂಗಡಿ, ಹೋಟೆಲ್ ಎಂದಿನಂತೆ ತೆರೆದಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ನಡುವೆ ಸಾಲಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಅವರು ನುಡಿದಂತೆ ನಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ಹಾಸನ ನಗರದ ವಿವಿಧೆಡೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಕಡೆ ಬೆಂಕಿ ಹಚ್ಚುವುದಕ್ಕೆ ಪೊಲೀಸರು ಅಡ್ಡಿಪಡಿಸಿದರು.
ಅಲ್ಲದೇ ಬಂದ್ ಗೆ ಕರೆ ಕೊಟ್ಟಿದ್ದರೂ, ತೆರೆದಿದ್ದ ಕೆಲ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಪ್ರಯತ್ನ ಮಾಡಿದರು. ರೈತರ ಸಾಲ ಮನ್ನಾ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ
ಹುಬ್ಬಳ್ಳಿ: ಸಾಲಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಬೆಂಬಲಿತ ರೈತ ಸಂಘಟನೆ ಕರೆ ನೀಡಿರುವ ಬಂದ್ ಅಂಗವಾಗಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ ಹಲವು ಕಾರ್ಯಕರ್ತರನ್ನು ನವನಗರ, ಬೈರಿದೇವರಕೊಪ್ಪದ ಬಳಿ ಪೊಲೀಸರು ಬಂಧಿಸಿದರು.
ಜನದಟ್ಟಣಿ ವಿರಳವಾಗಿರುವುದರಿಂದ ಶೇ 20ರಷ್ಟು ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಡುಪಿ
ಉಡುಪಿ: ರಾಜ್ಯ ಬಂದ್ ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಹಾಗೂ ಕೆಎಸ್ಆರ್ ಡಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿಲ್ಲ. ನಗರ ಸಾರಿಗೆ ವ್ಯವಸ್ಥೆ ಕೂಡ ಎಂದಿನಂತಿದೆ.
ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ಹೋಟೆಲ್ಗಳು ತೆರೆದಿವೆ. ಬೆಳಿಗ್ಗೆ 11ಕ್ಕೆ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ.
ತುಮಕೂರು
ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ತುಮಕೂರು ಬಿಜಿಎಸ್ ವೃತ್ತದಲ್ಲಿ ಶಾಸಕ ಜಿ.ಬಿ ಜ್ಯೋತಿ ಗಣೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.