ADVERTISEMENT

ಹಿಂದಿ ಚಲನಚಿತ್ರ ಸಂಗೀತ ನಿರ್ದೇಶಕ ಹಳದಿಪುರ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಸಿದ್ದಾಪುರ: ಕೆಲವು ದಿನಗಳ ಅನಾರೋಗ್ಯದ ಬಳಿಕ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ 24 ರಂದು ನಿಧನರಾದ ಹಿಂದಿ ಚಲನಚಿತ್ರ ಸಂಗೀತ ನಿರ್ದೇಶಕ, ಪರಶುರಾಮ ಹಳದಿಪುರ (90) ಅಂತ್ಯಕ್ರಿಯೆ ಭಾನುವಾರ ಇಲ್ಲಿ ನಡೆಯಿತು. ಇವರಿಗೆ ಒಬ್ಬ ಪುತ್ರಿ ಮತ್ತು ನಾಲ್ವರು ಪುತ್ರರು ಇದ್ದಾರೆ.

ರಾಜ್‌ಕಪೂರ್ ಮತ್ತು ವಿ.ಶಾಂತಾರಾಮ ಅವರಂತಹ ದಿಗ್ಗಜರ  ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದ ಹಳದಿಪುರ ಅವರು, ಮೂರ‌್ನಾಲ್ಕು ದಶಕಗಳಿಂದ ಹಳದಿಪುರ ಪಟ್ಟಣದಲ್ಲಿ ವಾಸವಾಗಿದ್ದರು. ನಲ್ವತ್ತರ ದಶಕದಲ್ಲಿ ಮೆಂಡೋಲಿನ್ ವಾದಕರಾಗಿ ಹಿಂದಿ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ್ದ ಅವರು, ಕಲ್ಯಾಣಜಿ ಆನಂದಜಿ, ಶಂಕರ ಜೈಕಿಶನ್, ಎಸ್.ಡಿಬರ್ಮನ್ ಸೇರಿದಂತೆ ಹಲವು ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಮತ್ತು ಖ್ಯಾತ ಗಾಯಕರೊಂದಿಗೆ ಕೆಲಸ ಮಾಡಿದ್ದರು.
 
ಸ್ವತಃ ಹಿಂದಿ ಚಿತ್ರವೊಂದನ್ನು ತಯಾರಿಸಿದ್ದ ಹಳದಿಪುರ, ಮುಂಬೈನಲ್ಲಿ ಸಿನಿಮಾ ಸಂಗೀತಗಾರರ ಸಂಘಟನೆಯನ್ನೂ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ಆ ಸಂಘಟನೆಯ ಉಪಾಧ್ಯಕ್ಷರಾಗಿ ಮತ್ತು ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಿಸಿದ್ದರು.

ಪಟ್ಟಣದಲ್ಲಿ ನಡೆದ ಅವರ ಅಂತ್ಯಸಂಸ್ಕಾರದಲ್ಲಿ ಅವರ ಶಿಷ್ಯ ಗೋಪಾಲ ಗೋವಿಂದ ಶಾನಭಾಗ, ಸಾಮಾಜಿಕ ಕಾರ್ಯಕರ್ತ ಶಶಿಭೂಷಣ ಹೆಗಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.