ಸುವರ್ಣಸೌಧ (ಬೆಳಗಾವಿ): ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರ ವಿರುದ್ಧ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಸೋಮವಾರ ವಿಧಾನಸಭೆಯಲ್ಲಿ ನಿಯಮ ೧೯೧ರ ಅಡಿ ಹಕ್ಕು ಚ್ಯುತಿ ಮಂಡಿಸಿದರು.
ಇದನ್ನು ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿ ದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಶೀಘ್ರ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
‘ನನ್ನನ್ನು ಕಳಂಕಿತ ಎಂದು ಹಿರೇಮಠ ಕರೆಯುತ್ತಾರೆ. ನಾನು ಮಂತ್ರಿಯಾಗಲು ಅನರ್ಹ ಎನ್ನುತ್ತಾರೆ. ಯಾರನ್ನು ಮಂತ್ರಿ ಮಾಡಬೇಕು ಅಥವಾ ಮಾಡಬಾರದು ಎನ್ನುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ.
ಮುಖ್ಯಮಂತ್ರಿ ಕಳುಹಿಸಿದ ಪಟ್ಟಿಯಲ್ಲಿನ ವ್ಯಕ್ತಿಯ ಬಗ್ಗೆ ರಾಜ್ಯಪಾಲರಿಗೆ ಅನುಮಾನಗಳಿದ್ದರೆ ಅವರು ಆ ಹೆಸರನ್ನು ಕೈಬಿಡಲು ಸೂಚಿಸಬಹುದು. ಆದರೆ ಹಿರೇಮಠ ಅವರು ಮುಖ್ಯಮಂತ್ರಿಯೂ ಅಲ್ಲ, ರಾಜ್ಯ ಪಾಲರೂ ಅಲ್ಲ, ರಾಷ್ಟ್ರಪತಿಯೂ ಅಲ್ಲ. ಚುನಾ ವಣಾ ಆಯೋಗವೂ ಅಲ್ಲ. ಆದರೂ ಅವರು ನನ್ನ ಬಗ್ಗೆ ಆರೋಪ ಮಾಡು ತ್ತಾರೆ’ ಎಂದು ರಮೇಶ್ ದೂರಿದರು.
‘ನಾನು ಐದನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿದ್ದೇನೆ. ಅಧಿವೇಶನ ಪ್ರಾರಂಭವಾಗುವ ಕಾಲದಲ್ಲಿಯೇ ನನ್ನ ಮೇಲೆ ಆರೋಪಗಳು ಕೇಳಿಬರುತ್ತವೆ. ಇದರ ಉದ್ದೇಶ ಏನು? ನಾನು ಯಾರಿಗೂ ಮುಖ ತೋರಿಸಬಾರದು ಎಂದು ತಾನೆ? ನನ್ನ ಹೆಂಡತಿ ಮಕ್ಕಳ ಗತಿ ಏನು? ನಾನು ಸಮಾಜಕ್ಕೆ ಮುಖ ತೋರಿಸುವುದು ಹೇಗೆ’ ಎಂದು ಭಾವುಕರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.