ADVERTISEMENT

ಹೆಚ್ಚುವರಿ ಪರಿಹಾರ ಒದಗಿಸಲು ಐಆರ್‌ಬಿ ಕಂಪೆನಿಗೆ ಸಚಿವ ದೇಶಪಾಂಡೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 6:03 IST
Last Updated 12 ಜೂನ್ 2017, 6:03 IST
ಹೆಚ್ಚುವರಿ ಪರಿಹಾರ ಒದಗಿಸಲು ಐಆರ್‌ಬಿ ಕಂಪೆನಿಗೆ ಸಚಿವ ದೇಶಪಾಂಡೆ ಸೂಚನೆ
ಹೆಚ್ಚುವರಿ ಪರಿಹಾರ ಒದಗಿಸಲು ಐಆರ್‌ಬಿ ಕಂಪೆನಿಗೆ ಸಚಿವ ದೇಶಪಾಂಡೆ ಸೂಚನೆ   

ಕಾರವಾರ: ಕುಮಟಾ ಬಳಿಯ ತಂಡ್ರಕುಳಿಯಲ್ಲಿ ಭಾನುವಾರ ಸಂಭವಿಸಿದ ಭೂಕುಸಿತ ದುರ್ಘಟನೆಯಲ್ಲಿ ಸಾವಿಗೀಡಾದ ಕುಟುಂಬಗಳಿಗೆ, ಗಾಯಗೊಂಡವರಿಗೆ ಹಾಗೂ ಹಾನಿಗೀಡಾದ ಮನೆಗಳಿಗೆ ಹೆಚ್ಚುವರಿಯಾಗಿ ಪರಿಹಾರ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಐಆರ್‌ಬಿ ಕಂಪೆನಿಗೆ ಸೂಚನೆ ನೀಡಿದ್ದಾರೆ.

ಭೂಕುಸಿತದಲ್ಲಿ ಸಾವಿಗೀಡಾದ ಕಂದಮ್ಮಗಳ ಕುಟುಂಬಗಳಿಗೆ ತಲಾ ₹4 ಲಕ್ಷವನ್ನು ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಸರ್ಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು. ಹಾನಿಗೀಡಾದ ಮನೆಗಳ ಸಮೀಕ್ಷೆ ಮಾಡಲಾಗಿದ್ದು, ಗರಿಷ್ಠ ನೆರವು ನೀಡಲು ಜಿಲ್ಲಾಧಿಕಾರಿ ಅವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಇದನ್ನು ಹೊರತುಪಡಿಸಿ ದುರ್ಘಟನೆಯಲ್ಲಿ ಮಡಿದವರ ಕುಟುಂಬಗಳಿಗೆ, ಗಾಯಗೊಂಡಿವರಿಗೆ, ಹಾನಿ ಸಂಭವಿಸಿದ ಮನೆಗಳಿಗೆ ಹೆಚ್ಚುವರಿಯಾಗಿ ಸೂಕ್ತ ಪರಿಹಾರ ಒದಗಿಸಲು ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್ಬಿಯ ಕಂಪೆನಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ADVERTISEMENT

ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆದಿರುವ ಕಡೆಗಳಲ್ಲಿ ಇನ್ನು ಮುಂದೆ ಇಂತಹ ದುರ್ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಗುಡ್ಡ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ಆದೇಶಿಸಲಾಗಿದೆ. ಇದೇ ರೀತಿ ನಿನ್ನೆ ದುರ್ಘಟನೆ ನಡೆದ ಗ್ರಾಮದಲ್ಲಿ ತೆರೆಯಲಾಗಿರುವ ಗಂಜಿಕೇಂದ್ರವನ್ನು ಮುಂದುವರೆಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.