ಶ್ರೀರಂಗಪಟ್ಟಣ: ಬಡತನದ ಬೇಗೆಯಿಂದ ಬಳಲುತ್ತಿರುವ ತಾಯಿಯೊಬ್ಬಳು ಎರಡನೇ ಬಾರಿಯೂ ಹೆಣ್ಣು ಶಿಶು ಹುಟ್ಟಿತು ಎಂಬ ಕಾರಣಕ್ಕೆ ತನ್ನ ಕರುಳ ಕುಡಿಯನ್ನು ಕತ್ತು ಹಿಸುಕಿ ಕೊಂದ ಘಟನೆ ತಾಲ್ಲೂಕಿನ ಬೊಮ್ಮೂರು ಅಗ್ರಹಾರದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಗ್ರಾಮದ ಮಹದೇವ ಎಂಬುವವರ ಪತ್ನಿ ರಾಚಮ್ಮಳೇ ಈ ಆರೋಪಿ.
ಮಗುವಿನ ಮೂಗಿನಲ್ಲಿ ರಕ್ತ ಒಸರಿದ್ದು, ಕತ್ತಿನ ಭಾಗ ನೀಲಿ ಬಣ್ಣಕ್ಕೆ ತಿರುಗಿದೆ.
‘ಮಂಗಳವಾರ ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಮಗು ಚೆನ್ನಾಗಿತ್ತು. 10 ಗಂಟೆ ವೇಳೆಗೆ ಮಗು ಸತ್ತ ಸುದ್ದಿ ಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಮೂಗಿನಲ್ಲಿ ರಕ್ತ ಜಿನುಗುತ್ತಿತ್ತು’ ಎಂದು ಗ್ರಾಮದ ಅಂಗನವಾಡಿ ಮೇಲ್ವಿಚಾರಕಿ ತಾರಾದೇವಿ ತಿಳಿಸಿದ್ದಾರೆ. ‘ಬೆಳಿಗ್ಗೆ 8.30ರಲ್ಲಿ ಮಗುವನ್ನು ನೋಡಿ ಹೋಗಿದ್ದೆ. ಕೆಲ ಹೊತ್ತಿನಲ್ಲಿನಲ್ಲೇ ಈ ಘಟನೆ ನಡೆದಿದೆ’ ಎಂದು ಗ್ರಾಮದ ಆಶಾ ಕಾರ್ಯಕರ್ತೆ ಪದ್ಮ ಹೇಳಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ್ದ ಪಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರವೀಂದ್ರ, ‘ಮಗುವನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ. ಕತ್ತಿನ ಸುತ್ತ ಇರುವ ಗುರುತು ಹಾಗೂ ರಕ್ತ ಒಸರಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿ’ ಎಂದು ತಿಳಿಸಿದ್ದಾರೆ. ಶಿಶುವಿನ ತಾಯಿಯನ್ನು ವಿಚಾರಿಸಿದಾಗ ಗಂಡನ ಹಿಂಸೆ ಹಾಗೂ ಬಡತನದಿಂದ ಬೇಸತ್ತು ಮಗುವನ್ನು ನಾನೇ ಕೊಂದೆ ಎಂದು ಸಿಡಿಪಿಓ ರಾಮಕೃಷ್ಣಯ್ಯ ಹಾಗೂ ಡಾ.ರವೀಂದ್ರ ಎದುರು ತಪ್ಪೊಪ್ಪಿಕೊಂಡಿದ್ದಾರೆ.
ಮಹದೇವು- ರಾಚಮ್ಮ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗು ಇದೆ. ರಾಚಮ್ಮ ಫೆ. 25ರಂದು ಪಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅರವಿಂದಪ್ಪ, ‘ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಲಿಂಗಾನುಪಾತದಲ್ಲಿ ದೊಡ್ಡ ಕಂದರ ಇದೆ. ಎರಡು ಮತ್ತು ಮೂರನೇ ಹೆಣ್ಣು ಶಿಶುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿವೆ. ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಹೇಳಿದ್ದಾರೆ. ಹೆಳವ ಜನಾಂಗಕ್ಕೆಸೇರಿದ ಈ ದಂಪತಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.