ADVERTISEMENT

‘ಭಾಗ್ಯ ಯೋಜನೆ’ಗಳಿಂದ ದೇಶ ನಾಶ

ಸೋಮಾರಿಗಳನ್ನು ಸೃಷ್ಟಿಸುತ್ತಿರುವ ರಾಜ್ಯ ಸರ್ಕಾರ: ಎಸ್‌.ಎಲ್‌.ಭೈರಪ್ಪ ಆತಂಕ

​ಪ್ರಜಾವಾಣಿ ವಾರ್ತೆ
Published 13 ಜೂನ್ 2015, 19:30 IST
Last Updated 13 ಜೂನ್ 2015, 19:30 IST

ಚಿಕ್ಕಮಗಳೂರು: ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ‘ಭಾಗ್ಯ’ ಯೋಜನೆಗಳು ದೇಶ ಉದ್ದಾರ ಮಾಡುವುದಿಲ್ಲ, ಇವು ದೇಶ ನಾಶ ಮಾಡುವ ಯೋಜನೆಗಳಾಗಿವೆ’ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಆತಂಕ ವ್ಯಕ್ತಪಡಿಸಿದರು.

ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಶನಿವಾರ ಭೇಟಿ ನೀಡಿದ್ದ ಅವರು, ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದರು.

‘ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಸಿದ್ದರಾಮಯ್ಯ ತಮ್ಮ ಓಟ್‌ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು, ಅನ್ನಭಾಗ್ಯ, ಶಾದಿ ಭಾಗ್ಯ, ಇತ್ಯಾದಿ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಅಷ್ಟೆ. ಬಿಪಿಎಲ್‌ ಕಾರ್ಡ್‌ಗಳಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿಯನ್ನು ಫಲಾನುಭವಿಗಳು ಪ್ರತಿ ಕೆ.ಜಿಗೆ ₹ 10ಕ್ಕೆ ಮಾರಿಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದ ರಾಜ್ಯ ಸರ್ಕಾರ ಬೇರೇನೂ ಸಾಧಿಸಲಿಲ್ಲ. ಸೋಮಾರಿಗಳನ್ನು ಸೃಷ್ಟಿಸುತ್ತಿದೆ’ ಎಂದು ಟೀಕಿಸಿದರು.

‘ಪ್ರತಿಯೊಬ್ಬರಲ್ಲೂ ದುಡಿದು ತಿನ್ನಬೇಕು, ದುಡಿಯದೆ ತಿನ್ನುವುದು ಅವಮಾನ ಎನ್ನುವ ಭಾವನೆ ಮೂಡಿಸಬೇಕಿತ್ತು. ಬಡತನ ನಿವಾರಿಸಲು, ಹಸಿವು ಮುಕ್ತ ರಾಜ್ಯವನ್ನಾಗಿಸಲು ಉದ್ಯೋಗ ಸೃಷ್ಟಿಯಲ್ಲದೆ ಬೇರೇನೂ ಮಾರ್ಗವಿಲ್ಲ. ಇದಕ್ಕಾಗಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ? ಎಷ್ಟು ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದ್ದಾರೆ?’ ಎಂದು ಪ್ರಶ್ನಿಸಿದ ಅವರು, ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಎಲೆಕ್ಟ್ರಾನಿಕ್‌ ಸಿಟಿ ನಿರ್ಮಿಸಿದರು. ಇದು ಈಗ ಬೆಂಗಳೂರಿನ ಸಿಲಿಕಾನ್‌ ವ್ಯಾಲಿ ಎನಿಸಿಕೊಂಡಿದೆ. ಮೈಸೂರು–ಬೆಂಗಳೂರು ರಸ್ತೆಯೂ ಅವರ ಕಾಲದಲ್ಲಿ ನಿರ್ಮಾಣವಾಯಿತು. ಜನರು ಇಂದಿಗೂ ಅವರ ಕೊಡುಗೆ ನೆನೆಯುತ್ತಾರೆ. ರಾಜ್ಯಕ್ಕೆ ಬರಲಿದ್ದ ದೊಡ್ಡ ಕೈಗಾರಿಕೆಯು ಸಿದ್ದರಾಮಯ್ಯ ಅವರ ನಿರ್ಲಕ್ಷ್ಯದಿಂದಾಗಿ, ಚಂದ್ರಬಾಬು ನಾಯ್ಡು ಆಂಧ್ರಪ್ರದೇಶಕ್ಕೆ ಕೊಂಡೊಯ್ದರು ಎಂದು ಟೀಕಿಸಿದರು.

ನನ್ನದು ಬಲಗೈ ಬರವಣಿಗೆ: ‘ನಾನು ಬಲಗೈಯಲ್ಲಿ ಬರೆಯುತ್ತೇನೆ. ಕೆಲವರು ಎಡಗೈಯಲ್ಲೂ ಬರೆಯುತ್ತಾರೆ. ಆದರೆ, ನನಗೆ ಎಡಗೈಯಿಂದ ಒಂದು ಸಹಿ ಕೂಡ ಮಾಡಲು ಆಗುವುದಿಲ್ಲ. ಹಾಗೆಯೇ ನಾನು ಏನು ಬರೆಯುತ್ತೇನೆಯೋ ಅದರ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ’

– ಇದು ಸಾಹಿತಿ ಎಸ್‌.ಎಲ್‌.ಭೈರಪ್ಪ ತಾನೊಬ್ಬ ಬಲಪಂಥೀಯ ಲೇಖಕ ಎನ್ನುವ ಹಣೆಪಟ್ಟಿಯನ್ನು ಸಮರ್ಥಿಸಿಕೊಂಡ ಪರಿ. ‘ನನ್ನನ್ನು ಬಲಪಂಥೀಯ ಲೇಖಕನೆಂದು ಕರೆಯುವವರು ಹಾಗೆಯೇ ಕರೆಯಲಿ. ನನ್ನನ್ನು ಬೇರೆಯವರು ಏನೆನ್ನುತ್ತಾರೆ, ಬಿಡುತ್ತಾರೆ ಎನ್ನುವ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹವರ ಹಿನ್ನೆಲೆ ಏನೆನ್ನುವುದನ್ನು ಅರಿತು ಅಂತಹವರಿಗೂ ಬೆಲೆ ಕೊಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಸದ್ಯಕ್ಕೆ ಈಗ ಏನನ್ನೂ ಬರೆಯುತ್ತಿಲ್ಲ. ನನ್ನ ತಲೆಯಲ್ಲಿ ಏನೂ ಬರೆಯುವಂತಹುದು ಹೊಳೆದಿಲ್ಲ. ಚಿಕ್ಕಮಗಳೂರು ಸೃಜನಶೀಲ ನಗರ. ಬಹಳ ವರ್ಷಗಳ ನಂತರ ಇಲ್ಲಿಗೆ ಭೇಟಿ ನೀಡಿದ್ದೇನೆ. ಇಲ್ಲಿ ಏನಾದರೂ ಹೊಳೆಯಬಹುದೇನೊ. ನನ್ನ ಸಾಹಿತ್ಯ ರಚನೆಗೆ ಪೂರಕ ವಿಚಾರ, ಪೂರಕ ಓದು ಹಾಗೂ ಪೂರಕ ಓಡಾಟಕ್ಕಷ್ಟೆ ಗಮನ ಕೊಡುತ್ತಿದ್ದೇನೆ’ ಎಂದರು.

*ಮುಸ್ಲಿಮರ ಮದುವೆಗೆ ₹ 50 ಸಾವಿರ ಆರ್ಥಿಕ ನೆರವು ನೀಡುವ ಶಾದಿಭಾಗ್ಯ ಯೋಜನೆ ಮೂಲಕ ರಾಜ್ಯ ಸರ್ಕಾರ ಜಾತೀಯತೆ ಬೆಳೆಸುತ್ತಿದೆ.
-ಎಸ್‌.ಎಲ್‌.ಭೈರಪ್ಪ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.