ಮೈಸೂರು: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ, ಅಭಿವೃದ್ಧಿ ಏನು ಎಂಬುದನ್ನು ಮೈಸೂರು ಜಿಲ್ಲೆಗೆ ಬಂದು ಅವರು (ವಿರೋಧ ಪಕ್ಷ) ನೋಡಬೇಕು’ ಎಂದು ಸಿ.ಎಂ ಸಿದ್ದರಾಮಯ್ಯ ಗುಡುಗಿದರು.
ನಂಜನಗೂಡಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ನಂಜನಗೂಡು ತಾಲ್ಲೂಕಿಗೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ‘ಅನ್ನ ಭಾಗ್ಯ’ ಯೋಜನೆಯಡಿ ಫಲಾನುಭವಿಗಳಿಗೆ ರಾಗಿ ವಿತರಿಸಿ ಅವರು ಮಾತನಾಡಿದರು.
‘ಅನ್ನ ಭಾಗ್ಯ’ ಜೊತೆ ರಾಗಿ: ‘ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಗೆ ‘ಅನ್ನ ಭಾಗ್ಯ’ ಯೋಜನೆಯಡಿ 1 ರೂಪಾಯಿಗೆ 1 ಕೆಜಿ ರಾಗಿಯನ್ನು ನೀಡಲಾಗುವುದು. ಇಬ್ಬರು ಸದಸ್ಯರು ಇರುವ ಕುಟುಂಬಕ್ಕೆ 1 ಕೆಜಿ ಮತ್ತು ಮೂರು ಮಂದಿ ಅದಕ್ಕಿಂತ ಹೆಚ್ಚಿದ್ದರೆ 2 ಕೆಜಿ ರಾಗಿಯನ್ನು ನೀಡಲಾಗುವುದು. ಉತ್ತರ ಕರ್ನಾಟಕದವರಿಗೆ ರಾಗಿ ಬದಲು ಜೋಳ ನೀಡಲಾಗುವುದು. ಅಕ್ಕಿ, ಗೋಧಿ, ರಾಗಿ –ಮೂರನ್ನೂ 1 ರೂ ದರದಲ್ಲಿ ಜನ ಕೊಳ್ಳಬಹುದು.
1ರಿಂದ 10ನೇ ತಾರೀಕಿನವರೆಗೆ ಕಡ್ಡಾಯವಾಗಿ ಪಡಿತರವನ್ನು ವಿತರಿಸಬೇಕು. ಇಲ್ಲವಾದಲ್ಲಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್, ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಂಸದ ಆರ್. ಧ್ರುವನಾರಾಯಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.