ತುಮಕೂರು: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 100 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ತಿಳಿಸಿದರು.
ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ 20 ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಿದ್ದೇವೆ’ ಎಂದರು.
‘ರಾಜ್ಯದಲ್ಲಿ ಬಿಜೆಪಿ ಜತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮಗೆ ಸ್ವತಂತ್ರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡಬೇಕು ಎಂದು ನಿತೀಶ್ ಕುಮಾರ್ ಅವರನ್ನು ಕೇಳಿದ್ದೆವು. ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
‘ನಾನು ಸ್ಪರ್ಧಿಸುವ ಚನ್ನಗಿರಿ ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರುವರಿಯಲ್ಲಿ ನಿತೀಶ್ ಕುಮಾರ್ ಬರುವರು. ದಾವಣಗೆರೆ ಜಿಲ್ಲೆ ಹಾಗೂ ರಾಜ್ಯದ ಇತರ ಕಡೆಗಳಿಗೂ ಭೇಟಿ ನೀಡುವರು’ ಎಂದು ತಿಳಿಸಿದರು.
‘ಯಾರ ವಿರುದ್ಧ ಹೋರಾಟ ಮಾಡಬೇಕು ಎನ್ನುವುದಕ್ಕಿಂತ ನಾವು ಯಾವುದರ ಪರ ಕೆಲಸ ಮಾಡಬೇಕು ಎನ್ನುವುದು ನಮಗೆ ಮುಖ್ಯ. ಅರಣ್ಯವನ್ನು ಹೆಚ್ಚಿಸುವುದು, ಎಲ್ಲೆಡೆ ಶುದ್ಧ ಕುಡಿಯುವ ನೀರು ನೀಡುವುದು, ವಿಷಮುಕ್ತವಾದ ಬೆಳೆಗಳನ್ನು ಬೆಳೆಯಲು ಗಮನ ಹರಿಸುವುದು ನಮ್ಮ ಪಕ್ಷದ ನೀತಿಗಳಾಗಿವೆ. ಪರ್ಯಾಯ ರಾಜಕಾರಣದ ಅವಶ್ಯಕತೆ ಇಂದು ಹೆಚ್ಚಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.