ಬಸವಕಲ್ಯಾಣ: ‘ಇನ್ನು ಮುಂದೆ ನನ್ನಿಂದ ಇಡೀ ವಿಶ್ವವೇ ಗೌರವಿಸುವ ಐತಿಹಾಸಿಕ ಕಾರ್ಯ ನೆರವೇರಲಿದ್ದು, ‘2020 ಜನಾರ್ದನರೆಡ್ಡಿ ಇಸ್ವಿ’ ಯಾಗಿ ಪರಿವರ್ತನೆ ಆಗಲಿದೆ’ ಎಂದು ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹೇಳಿದರು.
ಇಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಯೋಗಿ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘12 ವರ್ಷದ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಇದೇ ಜನಾರ್ದನರೆಡ್ಡಿ ಹಾಗೂ ರೆಡ್ಡಿ ಸಮಾಜ ಬಾಂಧವರು ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ. ಇನ್ನು ಮುಂದೆಯೂ ಇತಿಹಾಸ ಸೃಷ್ಟಿಯಾಗಲಿದೆ. ಬಸವಾದಿ ಶರಣರ ನಾಡು ಬಸವಕಲ್ಯಾಣದಿಂದಲೇ ಶೀಘ್ರದಲ್ಲಿ ಮಹತ್ವದ ಕೆಲಸ ಆರಂಭಿಸುವೆ’ ಎಂದು ಹೇಳಿದರು.
‘ರೆಡ್ಡಿ ಸಮುದಾಯದವರಿಗಾಗಿ ಮಹತ್ವದ ಕೊಡುಗೆ ನೀಡುವೆ. ಕೃಷ್ಣಾ ನದಿ ದಂಡೆಯಲ್ಲಿ 300 ಎಕರೆ ಜಮೀನು ಖರೀದಿಸಿ 100 ಅಡಿ ಎತ್ತರದ ಶಿವನ ಹಾಗೂ ತಲಾ 50 ಅಡಿ ಎತ್ತರದ ಯೋಗಿ ವೇಮನ ಮತ್ತು ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಪ್ರತಿಮೆ ಸ್ಥಾಪಿಸಲಾಗುವುದು. ಶಿಕ್ಷಣ ಹಾಗೂ ದಾಸೋಹದ ವ್ಯವಸ್ಥೆ ಕೈಗೊಂಡು ಇನ್ನೊಂದು ತುಮಕೂರಿನ ಸಿದ್ಧಗಂಗಾ ಮಠವನ್ನಾಗಿ ಅದನ್ನು ಪರಿವರ್ತಿಸುವೆ’ ಎಂದು ಹೇಳಿದರು.
ರೆಡ್ಡಿ ಜನಸಂಘದ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ, ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ, ಎನ್.ಬಿ.ರೆಡ್ಡಿ ಗುರೂಜಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.