ADVERTISEMENT

10,823 ಕನ್ನಡಿಗರು ತಾಯ್ನಾಡಿಗೆ ಮರಳಲು ನೋಂದಣಿ

​ಪ್ರಜಾವಾಣಿ ವಾರ್ತೆ
Published 6 ಮೇ 2020, 19:45 IST
Last Updated 6 ಮೇ 2020, 19:45 IST
   

ಬೆಂಗಳೂರು: ಕೋವಿಡ್‌ ಕಾರಣದಿಂದ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ 10,823 ಮಂದಿ ಕನ್ನಡಿಗರು ವಾಪಸ್‌ ಬರಲು ಹೆಸರುಗಳನ್ನು ನೋಂದಾಯಿಸಿದ್ದಾರೆ. ಅವರನ್ನು ಕರೆ ತರುವ ವ್ಯವಸ್ಥೆ ಆಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ವಿದೇಶಗಳಿಂದ ಬರುವ ಕನ್ನಡಿಗರಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಶೋಕ ಅವರು ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಹೆಚ್ಚಿನ ಸೌಲಭ್ಯ ಇರುವ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ ಆಗುವ ಇಚ್ಛೆ ಇದ್ದರೆ ಅವರೇ ಹಣ ಪಾವತಿಸಿ ಇರಬಹುದು. ಒಟ್ಟು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲೇಬೇಕು ಎಂದು ಸಚಿವರು ತಿಳಿಸಿದರು.

ADVERTISEMENT

ಕಾರ್ಮಿಕರ ಮನವೊಲಿಕೆ
ರಾಜ್ಯದಿಂದ ಬಿಹಾರಕ್ಕೆ ಹೊರಡಲು ಸಿದ್ಧರಾಗಿದ್ದ 6,000 ಕಾರ್ಮಿಕರ ಮನವೊಲಿಸಿ ಇಲ್ಲೇ ಇರಿಸಿಕೊಳ್ಳಲಾಗಿದೆ. ಅಲ್ಲದೇ, ಅವರು ಕೆಲಸ ಮಾಡುತ್ತಿದ್ದ ಸ್ಥಳಗಳಿಗೆ ವಾಹನಗಳಲ್ಲಿ ತೆರಳುವ ವ್ಯವಸ್ಥೆ ಮಾಡಲಾಯಿತು. ಮಂಗಳವಾರ ರಾತ್ರಿ 8ಕ್ಕೆ ನಾನೇ ಖುದ್ದಾಗಿ ಹೋಗಿ ಕಾರ್ಮಿಕರ ಮನವೊಲಿಸಿದೆ ಎಂದು ಅಶೋಕ ಹೇಳಿದರು.

ಹಿಂದಿರುಗಿದ ಕಾರ್ಮಿಕರಿಗೆ 15 ದಿನಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿನ್ನು ನೀಡಲಾಗಿದೆ. ಬಿಸಿಲಲ್ಲಿ ಸುತ್ತಾಡಿ ಜ್ವರ ಬಂದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿಸಿದರು.

‘ದೌಲತ್ತಿನಿಂದ ಮಾತನಾಡುವುದು ಬೇಡ’
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ದೌಲತ್ತಿನ ಮಾತನಾಡುವುದು ಬೇಡ. ಸರ್ಕಾರ ಕೇಳಿದರೆ ಹಣ ನೀಡುತ್ತೇನೆ ಎಂದಿದ್ದಾರೆ. ಸರ್ಕಾರಕ್ಕೆ ನಿಮ್ಮ ಹಣ ಬೇಕಿಲ್ಲ. ನಿಮ್ಮ ಬಳಿ ಅಷ್ಟೊಂದು ಹಣ ಇದ್ದರೆ, ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ₹20 ಸಾವಿರ ವಿತರಿಸಿ’ ಎಂದು ಸಚಿವ ಅಶೋಕ ಸವಾಲು ಹಾಕಿದರು.

‘ನೀವು ಸ್ಮಾರ್ಟ್‌ ಆಗಿ, ಆದರೆ ಓವರ್‌ ಸ್ಮಾರ್ಟ್‌ ಆಗುವುದು ಬೇಡ. ಸರ್ಕಾರಕ್ಕೆ ನಿಮ್ಮ ಹಣ ಬೇಕಿಲ್ಲ. ಕಾಂಗ್ರೆಸ್‌ ಕೊಟ್ಟ ಚೆಕ್‌ ನಮಗೆ ಬೇಕಿಲ್ಲ. ನಾನು, ನನ್ನಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಂ ಉಳ್ಳವರಿಗೆ ನಾವು ಕವಡೆಕಾಸಿನ ಕಿಮ್ಮತ್ತೂ ನೀಡುವುದಿಲ್ಲ’ ಎಂದರು.

ಇದೇ 18 ರಿಂದ ಧಾರಾವಾಹಿ ಚಿತ್ರೀಕರಣ‌
ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದರೂ, ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡು ಚಟುವಟಿಕೆ ಆರಂಭಿಸಲು ಕೆಲವು ದಿನಗಳು ಬೇಕಾಗುತ್ತವೆ. ಆದ್ದರಿಂದ ಇದೇ 18 ರಿಂದ ಚಿತ್ರೀಕರಣ‌ ಪ್ರಕ್ರಿಯೆ ಆರಂಭಿಸಲು ನಿರ್ಮಾಪಕರು ಒಪ್ಪಿಕೊಂಡಿದ್ದಾರೆ ಎಂದು ಅಶೋಕ ತಿಳಿಸಿದರು.

ಮನೆಯೊಳಗೆ ಚಿತ್ರೀಕರಣ ಮಾಡಲು‌ ಅವಕಾಶ ನೀಡಲಾಗುವುದು. ಯಾವುದೇ ಕಾರಣಕ್ಕೂ ಹೊರಾಂಗಣ ಚಿತ್ರೀಕರಣ‌ಕ್ಕೆ ಅವಕಾಶವಿಲ್ಲ. ಕೊರೊನಾ ಸಂಬಂಧ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.