ADVERTISEMENT

11 ವರ್ಷಗಳಿಂದ ಗಡ್ಡ, ತಲೆ ಕೂದಲು ಬಿಟ್ಟಿರುವ ಅಭಿಮಾನಿ

ಕುಮಾರಸ್ವಾಮಿ ಮತ್ತೆ ಸಿ.ಎಂ ಆಗಲೆಂದು ಹರಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:49 IST
Last Updated 22 ಮೇ 2018, 19:49 IST
11 ವರ್ಷಗಳಿಂದ ಗಡ್ಡ, ತಲೆ ಕೂದಲು ಬಿಟ್ಟಿರುವ ಅಭಿಮಾನಿ
11 ವರ್ಷಗಳಿಂದ ಗಡ್ಡ, ತಲೆ ಕೂದಲು ಬಿಟ್ಟಿರುವ ಅಭಿಮಾನಿ   

ಕೆ.ಆರ್.ನಗರ (ಮೈಸೂರು): ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಉದ್ಧೇಶದಿಂದ ಹರಕೆ ಹೊತ್ತು 11 ವರ್ಷಗಳಿಂದ ಗಡ್ಡ, ತಲೆ ಕೂದಲು ತೆಗೆಯದ ಅಭಿಮಾನಿಯೊಬ್ಬರ ಕನಸು ಇಂದು ನನಸಾಗಲಿದೆ.

ತಾಲ್ಲೂಕಿನ ಮೇಲೂರು ಗ್ರಾಮದ ರೈತ ರಾಮಕೃಷ್ಣೇಗೌಡ ಈ ಅವಕಾಶಕ್ಕಾಗಿ ಕಾಯುತ್ತಿದ್ದರು.

‘ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಜನಪರವಾದ, ವಿಭಿನ್ನ ಕಾರ್ಯಕ್ರಮ ನೀಡಿದ್ದರು. ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ರಾಜ್ಯದಲ್ಲಿ ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ಬಡವರ ಮೇಲೆ ದಬ್ಬಾಳಿಕೆ ಹೆಚ್ಚಾದವು. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆದರೆ ರಾಜ್ಯದಲ್ಲಿ ನೆಮ್ಮದಿ ನೆಲಸಲಿದೆ ಎಂಬ ಕಾರಣಕ್ಕೆ 2007ರಲ್ಲಿ ಸಾಲಿಗ್ರಾಮದ ಯೋಗಾನರಸಿಂಹ ಸ್ವಾಮಿಗೆ ಹರಕೆ ಹೊತ್ತೆ’ ಎನ್ನುತ್ತಾರೆ ರಾಮಕೃಷ್ಣೇಗೌಡ.

ADVERTISEMENT

‘2013ರ ಫೆಬ್ರುವರಿಯಲ್ಲಿ ಸಾಲಿಗ್ರಾಮದ ಯೋಗಾನರಸಿಂಹ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದೆ. ಗಡ್ಡ, ತಲೆ ಕೂದಲು ತೆಗೆಯುವಂತೆ ಸಲಹೆ ನೀಡಿದ್ದರು. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುವವರೆಗೂ ತೆಗೆಯುವುದಿಲ್ಲ ಎಂದು ತಿಳಿಸಿದ್ದೆ. ಆಗ ದೇವೇಗೌಡರು ನನ್ನ ಹೆಗಲ ಮೇಲೆ ಕೈ ಇಟ್ಟು ಭಾವುಕರಾಗಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮೇಲುಕೋಟೆಗೆ ತೆರಳಿ ಮುಡಿ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದು, ರಾಮಕೃಷ್ಣೇಗೌಡ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.