ADVERTISEMENT

ರಾಜ್ಯದಲ್ಲಿ 1292 ಕಪ್ಪು ಶಿಲೀಂಧ್ರ ಸಕ್ರಿಯ ಪ್ರಕರಣ, ಧಾರವಾಡದಲ್ಲಿ ಹೆಚ್ಚು ಸಾವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 8:49 IST
Last Updated 1 ಜೂನ್ 2021, 8:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ನಿಂದ ಗುಣಮುಖರಾದ ಬಳಿಕವೂ ಕಪ್ಪು ಶಿಲೀಂಧ್ರ ಜನರನ್ನು ಕಾಡುತ್ತಿದೆ. ಔಷಧಿಯ ಕೊರತೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳಲಾಗದೆ ಹಲವರ ಸಾವಾಗುತ್ತಿದೆ.

ರಾಜ್ಯದಲ್ಲಿ ಈವರೆಗೆ 1370 ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ, 27 ಮಂದಿ ಗುಣಮುಖರಾಗಿದ್ದು, 51 ಮೃತಪಟ್ಟಿದ್ದಾರೆ. ಇನ್ನು, 1292 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಸರ್ಕಾರದಿಂದ ಪಡೆದ ಮಾಹಿತಿಯನ್ನು ಎಎನ್‌ಐ ಟ್ವೀಟ್ ಮಾಡಿದೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 557 ಪ್ರಕರಣ ಪತ್ತೆಯಾಗಿದ್ದು, 540 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಮಂದಿ ಗುಣಮುಖರಾಗಿದ್ದರೆ, 6 ಮಂದಿ ಮೃತಪಟ್ಟಿದ್ದಾರೆ.

ADVERTISEMENT

156 ಪ್ರಕರಣಗಳೊಂದಿಗೆ ಧಾರವಾಡ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲೇ ಅತಿ ಹೆಚ್ಚು 14 ಮಂದಿ ಇಲ್ಲಿ ಕಪ್ಪು ಶಿಲೀಂಧ್ರದಿಂದ ಅಸುನೀಗಿದ್ದಾರೆ.

ಈ ಮಧ್ಯೆ, ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ 1,930 ಆ್ಯಂಫೋಟೆರಿಸಿನ್-ಬಿ ವಯಲ್ಸ್‌ಗಳನ್ನು ಹಂಚಿಕೆ ಮಾಡಿದೆ. ಈ ಕುರಿತು ಔಷಧ ಇಲಾಖೆಯನ್ನೂ ಹೊಂದಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಟ್ವೀಟ್‌ ಮಾಡಿದ್ದರು.

ಇದನ್ನು ಪ್ರಶ್ನಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ 1319 ಸೋಂಕಿತರಿದ್ದಾರೆಂದು ವರದಿಗಳು ಹೇಳುತ್ತಿವೆ, ಒಬ್ಬ ಸೋಂಕಿತನ ಚಿಕಿತ್ಸೆಗೆ 50ರಿಂದ 90 ವಯಲ್ಸ್ ಬೇಕು. ನೀವು ಕೊಟ್ಟಿದ್ದು ಎಷ್ಟು ಜನರಿಗೆ ಸಾಲುತ್ತದೆಂದು ಅರಿವಿದೆಯೇ’ ಎಂದು ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.