ಹೊಸಪೇಟೆ: ನಗರದ ಎಪಿಎಂಸಿ ಆವರಣದಲ್ಲಿರುವ ವೆಂಕೋಬ ಶೆಟ್ಟಿ ಅವರಿಗೆ ಸೇರಿದ ಗೋದಾಮಿನ ಮೇಲೆ ಭಾನುವಾರ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ಎಂ.ಪವನಕುಮಾರ್, ‘ಅನ್ನಭಾಗ್ಯ’ ಯೋಜನೆಗೆ ಸೇರಿದ 168.86 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ದಾಸ್ತಾನು ಮಾಡಿದ್ದ 49 ಕೆ.ಜಿ ತೂಕದ 264 ಅಕ್ಕಿ ಚೀಲ ಹಾಗೂ 50 ಕೆ.ಜಿ ತೂಕದ 79 ಅಕ್ಕಿ ಚೀಲಗಳನ್ನು, ಪೊಲೀಸ್ ಸಿಬ್ಬಂದಿ ಯೊಂದಿಗೆ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ 70ಕ್ಕೂ ಅಧಿಕ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯ ಖಾಲಿ ಚೀಲಗಳೂ ಪತ್ತೆಯಾಗಿದ್ದು, ಗೋದಾಮನ್ನು ಅಧಿ ಕಾರಿಗಳು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಪತ್ತೆಯಾಗಿರುವ 25 ಕೆ.ಜಿ ತೂಕದ 330 ಸೋನಾ ಮಸೂರಿ ಅಕ್ಕಿ ಚೀಲಗಳು ವೆಂಕೋಬ ಶೆಟ್ಟಿ ಅವರಿಗೆ ಸೇರಿದವು ಎಂದು ತಿಳಿದು ಬಂದಿದೆ. ನಗರದ ಈ ವರ್ತಕ ಸೋನಾ ಮಸೂರಿ ಅಕ್ಕಿಯೊಂದಿಗೆ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು ಎಂಬ ದೂರಿನ ಅನ್ವಯ ಈ ದಾಳಿ ನಡೆದಿತ್ತು. ಸೋನಾ ಮಸೂರಿ ಹಾಗೂ ‘ಅನ್ನಭಾಗ್ಯ’ ಅಕ್ಕಿ ಚೀಲಗಳೆರಡೂ ಒಂದೇ ಸ್ಥಳದಲ್ಲಿ ಪತ್ತೆಯಾಗಿವೆ. ಬಡಾ ವಣೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.