ADVERTISEMENT

ಮತ ಎಣಿಕೆಗೆ 2 ದಿನ ಬೇಕಾ? ಎಂದು ಕೇಳಿದ ಉಪೇಂದ್ರ– ನೆಟ್ಟಿಗರಿಂದ ಪರ–ವಿರೋಧ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2023, 15:37 IST
Last Updated 29 ಮಾರ್ಚ್ 2023, 15:37 IST
ಉಪೇಂದ್ರ
ಉಪೇಂದ್ರ   

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಏತನ್ಮಧ್ಯೆ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಬಹುಚರ್ಚಿತ ಟ್ರೆಂಡಿಂಗ್ ವಿಷಯವಾಗಿದೆ.

ಇದೇ ವೇಳೆ ನಟ ಉಪೇಂದ್ರ ಅವರು ಡಿಜಿಟಲ್‌ನ ಈ ಕಾಲದಲ್ಲಿ ಮತ ಎಣಿಕೆಗೆ ಎರಡು ದಿನ ಬೇಕೆ ಎಂದು ಟ್ವಿಟರ್‌ನಲ್ಲಿ ಪ್ರಶ್ನಸಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಯಾಗಿವೆ.

ಕರ್ನಾಟಕದಲ್ಲಿ ಮೇ 10 ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13 ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ? ಎಂದು ಮೊದಲ ಟ್ವೀಟ್‌ನಲ್ಲಿ ಉಪೇಂದ್ರ ಕೇಳಿದ್ದಾರೆ.

ADVERTISEMENT

ಈ ಟ್ವೀಟ್‌ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ‘ಉಪ್ಪಿ ಸ್ವಲ್ಪ ಅರ್ಥ ಮಾಡ್ಕೊಳಿ ಸ್ವಾಮಿ. ಮತಯಂತ್ರಗಳನ್ನು ಮತಗಟ್ಟೆಗಳಿಂದ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ಯಬೇಕು, ಅದರ ಜೊತೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಇತ್ಯಾದಿ ಇರುತ್ತೆ ಅಲ್ವಾ? ಇಷ್ಟೆಲ್ಲಾ ಮಾಡೋಕ್ಕೆ 2 ದಿನ ಬೇಕಲ್ವಾ ಸ್ವಾಮಿ? ಎಂದು ವ್ಯಕ್ತಿಯೊಬ್ಬರು ಕೇಳಿದ್ದಾರೆ

ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ದಿನವೇ ರಿಲೀಸ್ ಮಾಡ್ತೀರಾ? ಏಕೆಂದು ತಿಳಿಸುವಿರಾ ಸ್ವಾಮಿ? ಎಂದು ಮತ್ತೊಬ್ಬರು ಕೇಳಿದ್ದಾರೆ.

ಇನ್ನೊಬ್ಬರು, ಉಪ್ಪಿ ಅವರು ಪ್ರಶ್ನೆಯ ಹಿಂದಿನ ನಿಜವಾದ ಕಾಳಜಿ ಅರ್ಥ ಮಾಡಿಕೊಳ್ಳಿ ಎಂದು ಇನ್ನೊಬ್ಬರು ಕೇಳಿದ್ದಾರೆ.

ತಮ್ಮ ಟ್ವೀಟ್‌ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಮತ್ತೊಂದು ಟ್ವೀಟ್ ಮಾಡಿದ ಉಪೇಂದ್ರ, ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ…. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?! ವಾರೆ ವಾಹ್ … ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು…. ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.