ಕೆಎಸ್ಆರ್ಟಿಸಿ
ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಡೀಸೆಲ್ ಶುಲ್ಕ, ಭವಿಷ್ಯ ನಿಧಿ ವಂತಿಗೆ ಪಾವತಿಸಲು ರಾಜ್ಯ ಸರ್ಕಾರವು ₹2,000 ಕೋಟಿ ಸಾಲದ ಮೊರೆ ಹೋಗುತ್ತಿದೆ. ಸಂಸ್ಥೆಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ನಿರಾಕರಿಸಿರುವ ರಾಜ್ಯ ಸರ್ಕಾರವು, ಸಂಸ್ಥೆಗಳ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಲು ಸಾಲದ ಮೊರೆ ಹೋಗಿದೆ. ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಒಟ್ಟು ₹6,330.25 ಕೋಟಿ ಬಾಕಿ ಉಳಿಸಿಕೊಂಡಿವೆ.
‘ಕಾರ್ಯಾಚರಣೆಯ ಅತ್ಯುತ್ತಮ ನಿರ್ವಹಣೆ ಮತ್ತು ಶಕ್ತಿ ಯೋಜನೆಯಿಂದ ಸಂಸ್ಥೆಗಳ ಆದಾಯ ಗಳಿಕೆ ಏರಿಕೆಯಾಗಿದೆ. ಆದರೆ 2012ರಿಂದ ವಿದ್ಯಾರ್ಥಿ ಬಸ್ ಪಾಸ್ ದರ (ಬಿಎಂಟಿಸಿಯಲ್ಲಿ 2015ರಿಂದ) ಪರಿಷ್ಕರಣೆ ಮಾಡದೇ ಇರುವುದು, ಡೀಸೆಲ್ ವೆಚ್ಚದಲ್ಲಿ ಆಗಿರುವ ಏರಿಕೆ ಮತ್ತು 2023ರ ಮಾರ್ಚ್ 1ರಿಂದ ವೇತನ ಪರಿಷ್ಕರಣೆಯಿಂದ ಸಂಸ್ಥೆಗಳು ಹೆಚ್ಚುವರಿ ಹೊರೆ ಅನುಭವಿಸುತ್ತಿವೆ. ನಗದು ಒಳಹರಿವು ಉತ್ತಮವಾಗಿ ಇಲ್ಲದೇ ಇರುವ, ಸಂಸ್ಥೆಗಳು ಈ ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
‘ಸಾರಿಗೆ ಸಂಸ್ಥೆಗಳು ಉಳಿಸಿಕೊಂಡಿರುವ ಬಾಕಿಗಳನ್ನು ಪಾವತಿ ಮಾಡಲು ಯಾವುದೇ ಇತರ ಸಂಪನ್ಮೂಲಗಳು ಲಭ್ಯವಿರುವುದಿಲ್ಲ. ಹೀಗಾಗಿ ಈಗ ಡೀಸೆಲ್ ಶುಲ್ಕ ಮತ್ತು ಭವಿಷ್ಯ ನಿಧಿ ವಂತಿಗೆ ಬಾಕಿ ಪಾವತಿಗೆ ಅಗತ್ಯವಿರುವ ಸ್ವಲ್ಪ ಮೊತ್ತವನ್ನು ಪಾವತಿ ಮಾಡಲು ಸರ್ಕಾರದ ಖಾತರಿಯೊಂದಿಗೆ ಸಾಲ ಪಡೆಯಬಹುದು’ ಎಂದು ಸರ್ಕಾರ ಅನುಮೋದನೆ ನೀಡಿದೆ.
‘ಈ ಸಾಲದ ಮೊತ್ತ ಮತ್ತು ಸಂಬಂಧಿತ ಬಡ್ಡಿಯನ್ನು ಸಾರಿಗೆ ಸಂಸ್ಥೆಗಳೇ ಮರುಪಾವತಿಸಬೇಕು. ಸದರಿ ಮೊತ್ತವನ್ನು ಡೀಸೆಲ್ ಶುಲ್ಕ ಪಾವತಿಗೆ ಆದ್ಯತೆ ಮೇರೆಗೆ ಬಳಸತಕ್ಕದ್ದು’ ಎಂದು ಸರ್ಕಾರ ಷರತ್ತು ಹಾಕಿದೆ.
‘ಶಕ್ತಿ’ ಅಧ್ಯಯನಕ್ಕೆ ಆಂಧ್ರ ನಿಯೋಗ
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ಯ ಅನುಷ್ಠಾನ, ಕಾರ್ಯಸಾಧ್ಯತೆ ಮತ್ತು ಪರಿಣಾಮಗಳ ಅಧ್ಯಯನ ನಡೆಸಲು ಆಂಧ್ರ ಪ್ರದೇಶ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳ ತಂಡವು ರಾಜ್ಯಕ್ಕೆ ಭೇಟಿ ನೀಡಲಿದೆ.
ಕರ್ನಾಟಕದಂತೆಯೇ ಆಂಧ್ರ ಪ್ರದೇಶದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸವಲತ್ತು ನೀಡಲು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಆಂಧ್ರದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ಶೆಟ್ಟಿ, ಗೃಹ ಸಚಿವೆ ವಂಗಲಪುಡಿ ಅನಿತಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಗುಮ್ಮಟ್ಟಿ ಸಂಧ್ಯಾರಾಣಿ ಇದೇ ಜನವರಿ 2ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಸಚಿವರ ಜತೆ 12 ಅಧಿಕಾರಿಗಳ ನಿಯೋಗವೂ ಇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ರಾಜ್ಯದ ಅಧಿಕಾರಿಗಳ ಜತೆ ಆಂಧ್ರದ ನಿಯೋಗವು ಸಮಾಲೋಚನೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.