ADVERTISEMENT

244 ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 4 ಮೇ 2023, 21:01 IST
Last Updated 4 ಮೇ 2023, 21:01 IST
ದುಂಡುಪಾಳ್ಯ ಗ್ಯಾಂಗ್‌ ವಿರುದ್ಧದ ಪ್ರಕರಣ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ದುಂಡುಪಾಳ್ಯ ಗ್ಯಾಂಗ್‌ ವಿರುದ್ಧದ ಪ್ರಕರಣ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ   

ಬೆಂಗಳೂರು: ಹೈಕೋರ್ಟ್‌ನ ವಿವಿಧ ವಿಭಾಗಗಳ ರಿಜಿಸ್ಟ್ರಾರ್‌ ಹುದ್ದೆಗಳಿಗೆ ಆರು ಮಂದಿ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಿರುವುದೂ ಸೇರಿದಂತೆ ಒಟ್ಟು 244 ನ್ಯಾಯಾಧೀಶರ ವರ್ಗಾವಣೆ ಮಾಡಲಾಗಿದೆ.

ಈ ಕುರಿತಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕೆ. ಎಸ್‌. ಭರತ್‌ ಕುಮಾರ್‌ ಅಧಿಸೂಚನೆ ಹೊರಡಿಸಿದ್ದು, ಇದೇ 22ರಿಂದ ಈ ಕುರಿತ ಆದೇಶ ಅನ್ವಯವಾಗಲಿದೆ. ಪ್ರಮುಖವಾಗಿ ಈ ಮೊದಲು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಕಸನಪ್ಪ ನಾಯ್ಕ್‌ ಅವರನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿಯಾಗಿ ಮತ್ತು  ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಇ. ಚಂದ್ರಕಲಾ ಅವರನ್ನು ಮೌಲಸೌಕರ್ಯ ಮತ್ತು ನಿರ್ವಹಣಾ ರಿಜಿಸ್ಟ್ರಾರ್‌ ಆಗಿ ನೇಮಿಸಲಾಗಿದೆ.

ಮೈಸೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿದ್ದ ಸರಸ್ವತಿ ವಿಷ್ಣು ಕೋಸಂದರ್‌ ಅವರನ್ನು ವಿಚಕ್ಷಣಾ ವಿಭಾಗದ ರಿಜಿಸ್ಟ್ರಾರ್‌ ಆಗಿ, ಕಲಬುರಗಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಚ್‌.ಜೆ. ಮರುಳಸಿದ್ಧರಾಧ್ಯ ಅವರನ್ನು ಕಲಬುರಗಿ ‍ಪೀಠದ ಹೆಚ್ಚುವರಿ ರಿಜಿಸ್ಟ್ರಾರ್‌ ಜನರಲ್‌ ಹುದ್ದೆಗೆ ನೇಮಕ ಮಾಡಲಾಗಿದೆ.

ADVERTISEMENT

ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ. ನಾರಾಯಣ ಪ್ರಸಾದ್‌ ಅವರನ್ನು ನೇಮಕಾತಿ ವಿಭಾಗದ ರಿಜಿಸ್ಟ್ರಾರ್‌ ಆಗಿಯೂ, ಬೆಂಗಳೂರು ಗ್ರಾಮಾಂತರ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಸವರಾಜ್‌ ಚೆಂಗಟಿ ಅವರನ್ನು ಅಂಕಿಸಂಖ್ಯೆ ಮತ್ತು ಪರಿಶೀಲನಾ ರಿಜಿಸ್ಟ್ರಾರ್‌ ಆಗಿಯೂ ನೇಮಿಸಲಾಗಿದೆ.

ನಿವೃತ್ತಿ: ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿ. ಆರ್‌. ಅಂಬೇಡ್ಕರ್‌ ಭಾವಚಿತ್ರ ಇರಿಸುವ ವಿಚಾರದಲ್ಲಿ ವಿವಾದದ ಕೇಂದ್ರವೆನಿಸಿದ್ದ ಹಾಗೂ ಸದ್ಯ ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಇದೇ 31ರಂದು ನಿವೃತ್ತಿ ಹೊಂದಲಿದ್ದಾರೆ. ಇವರ ಸ್ಥಾನಕ್ಕೆ ಹೈಕೋರ್ಟ್‌ನ ನೇಮಕಾತಿ ವಿಭಾಗದ ರಿಜಿಸ್ಟ್ರಾರ್‌ ಮಂಜುನಾಥ್‌ ನಾಯಕ್‌ ಅವರನ್ನು ನೇಮಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.