ADVERTISEMENT

2.72 ಲಕ್ಷ ಟನ್ ಅದಿರು ಮಾರಾಟ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ದಾಸ್ತಾನು ಇರುವ 2.5 ಕೋಟಿ ಟನ್ ಕಬ್ಬಿಣದ ಅದಿರನ್ನು ಹರಾಜು ಮಾಡುವ ಕಾರ್ಯವನ್ನು ನಿರ್ವಹಿಸುತ್ತಿರುವ ಉಸ್ತುವಾರಿ ಸಮಿತಿ, ಮೊದಲ ವಾರ ಕೇವಲ 2.72 ಲಕ್ಷ ಟನ್ ಅದಿರು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಸೆ. 14ರಿಂದ ಕಬ್ಬಿಣದ ಅದಿರಿನ ಇ-ಹರಾಜು ಪ್ರಕ್ರಿಯೆ ಆರಂಭವಾಗಿತ್ತು. 3.96 ಲಕ್ಷ ಟನ್ ಅದಿರನ್ನು ವಿಲೇವಾರಿಗೆ ಗುರುತಿಸಲಾಗಿತ್ತು. 18ರಿಂದ 20 ಕಂಪೆನಿಗಳು ಹರಾಜಿನಲ್ಲಿ ಪಾಲ್ಗೊಂಡಿದ್ದು, 2.72 ಲಕ್ಷ ಟನ್ ಮಾತ್ರ ವಿಲೇವಾರಿ ಆಗಿದೆ.

ವಾರಕ್ಕೊಮ್ಮೆ ಅದಿರು ಹರಾಜು ನಡೆಸಲು ಸಮಿತಿ ಈ ಮೊದಲು ಯೋಚಿಸಿತ್ತು. ಆದರೆ, ಮೊದಲ ವಾರ ಹೆಚ್ಚು ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಹರಾಜು ನಡೆಸಲು ನಿರ್ಧರಿಸಿದೆ.ಈ ಸಮಿತಿ ಪ್ರತಿ ತಿಂಗಳೂ 15 ಲಕ್ಷ ಟನ್ ಅದಿರನ್ನು ಹರಾಜಿನ ಮೂಲಕ ಮಾರಾಟ ಮಾಡಬೇಕು. ಆದರೆ ಈಗಿನಂತೆ 2.72 ಲಕ್ಷ ಟನ್ ವಾರಕ್ಕೊಮ್ಮೆ ಮಾರಾಟವಾದರೆ ಗುರಿ ತಲುಪುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

ಅದಿರು ಹರಾಜು ಪ್ರಕ್ರಿಯೆ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಸಮಿತಿಯ ಸದಸ್ಯರೂ ಆಗಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮ, `ಅದಿರು ಮಾರಾಟ ಪ್ರಕ್ರಿಯೆ ಹಲವು ಕೆಲಸಗಳನ್ನು ಒಳಗೊಂಡಿದೆ. ಹೀಗಾಗಿ 15 ದಿನಕ್ಕೊಮ್ಮೆ ಹರಾಜು ನಡೆಸಲು ನಿರ್ಧರಿಸಲಾಗಿದೆ. ಮೊದಲ ವಾರ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ಹರಾಜಿನಲ್ಲಿ ಕನಿಷ್ಠ 10 ಲಕ್ಷ ಟನ್ ಮಾರಾಟ ಮಾಡುವ ನಿರೀಕ್ಷೆ ಇದೆ~ ಎಂದರು. ಕೇಂದ್ರ ಉಕ್ಕು ಸಚಿವಾಲಯದ ಅಧೀನ ಸಂಸ್ಥೆಯಾದ ಎಂಎಸ್‌ಟಿಸಿ ಮೂಲಕ ಇ-ಹರಾಜು ನಡೆಯುತ್ತಿದೆ. ಮುಂದಿನ ಹರಾಜು ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.