ಬೆಂಗಳೂರು: ರಾಜ್ಯ ಸರ್ಕಾರವು 2025-26ನೇ ಸಾಲಿನ ಬಜೆಟ್ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ವಾರ್ಷಿಕ ಅನುದಾನವಾಗಿ ₹35 ಕೋಟಿ ಮೀಸಲಿಡಬೇಕು ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಜೋಶಿ, ‘ಸ್ವಾತಂತ್ರ್ಯಾ ನಂತರ ಚುನಾಯಿತ ಸರ್ಕಾರಗಳು ಪರಿಷತ್ತಿನ ಅವಶ್ಯಕತೆಗಳಿಗೆ ಅನುಗುಣವಾಗಿ ಅನುದಾನ ನೀಡುತ್ತಾ ಬಂದಿವೆ. 2017-18ರಲ್ಲಿ ₹12 ಕೋಟಿ ಅನುದಾನ ನೀಡಿದ್ದು, ಪ್ರಸ್ತುತ ಸಂದರ್ಭಕ್ಕೆ ಬೆಲೆ ಏರಿಕೆಯನ್ನು ಪರಿಗಣಿಸಿ ಹೆಚ್ಚುವರಿ ಅನುದಾನ ನೀಡಬೇಕು’ ಎಂದು ಕೋರಿದ್ದಾರೆ.
‘ಪರಿಷತ್ತಿನ ವ್ಯಾಪ್ತಿ ಕೂಡ ವಿಸ್ತಾರವಾಗಿದ್ದು, ಜಿಲ್ಲಾ ಮಟ್ಟ ಮಾತ್ರವಲ್ಲದೆ ತಾಲ್ಲೂಕು, ಹೋಬಳಿ ಮಟ್ಟದಲ್ಲೂ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿವೆ. ಪರಿಷತ್ತಿನ ನಿರ್ವಹಣೆ, ಪುಸ್ತಕ ಪ್ರಕಟಣೆ, ವಿಚಾರಸಂಕಿರಣ, ಕಾರ್ಯಾಗಾರಗಳು, ಸ್ಥಗಿತಗೊಂಡಿರುವ ನಿಘಂಟು ಯೋಜನೆ ಮುಂದುವರಿಕೆ ಸೇರಿ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ₹ 35 ಕೋಟಿ ಅನುದಾನದ ಅಗತ್ಯವಿದೆ. ಬಜೆಟ್ನಲ್ಲಿ ಈ ಮೊತ್ತವನ್ನು ಕಾಯ್ದಿರಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.