ADVERTISEMENT

ಪ್ರವಾಹ ಪರಿಹಾರಕ್ಕಾಗಿ ₹ 4,000 ಕೋಟಿ: ಕೇಂದ್ರಕ್ಕೆ ರಾಜ್ಯ ಸರ್ಕಾರದ ಬೇಡಿಕೆ

ಪ್ರಧಾನಿ ಜೊತೆ ವಿಡಿಯೊ ಸಂವಾದದಲ್ಲಿ ಆರ್‌. ಅಶೋಕ, ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 11:45 IST
Last Updated 10 ಆಗಸ್ಟ್ 2020, 11:45 IST
ಪ್ರಧಾನಿ ಜೊತೆ ವಿಡಿಯೊ ಸಂವಾದದಲ್ಲಿ ಕಂದಾಯ ಸಚಿವ ಆರ್‌. ಅಶೋಕ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ
ಪ್ರಧಾನಿ ಜೊತೆ ವಿಡಿಯೊ ಸಂವಾದದಲ್ಲಿ ಕಂದಾಯ ಸಚಿವ ಆರ್‌. ಅಶೋಕ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಭಾರಿ ಮಳೆ ಮತ್ತು ಪ್ರವಾಹದಿಂದ ಸುಮಾರು ₹ 4,000 ಕೋಟಿಯಷ್ಟು ಹಾನಿಯಾಗಿದ್ದು, ಅಷ್ಟು ಹಣವನ್ನು ಮುಂಗಡವಾಗಿ ನೀಡಬೇಕು ಎಂದು ರಾಜ್ಯ ಸರ್ಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.

ಪ್ರಧಾನಿ ಜತೆ ವಿಡಿಯೊ ಸಂವಾದ ಮುಗಿದ ಬಳಿಕ ಕಂದಾಯ ಸಚಿವ ಆರ್‌. ಅಶೋಕ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಸಭೆಯ ಕುರಿತು ಮಾಹಿತಿ ನೀಡಿದರು.

ಮನೆಗಳು, ಸರ್ಕಾರಿ ಕಟ್ಟಡಗಳು, ರಸ್ತೆ ಮತ್ತು ಸೇತುವೆ, ಬೆಳೆಗಳು ನಾಶವಾಗಿವೆ. ಇದರ ಪ್ರಾಥಮಿಕ ಅಂದಾಜು ಮೊತ್ತ ₹ 4,000 ಕೋಟಿ ಎಂದು ಅಂದಾಜು ಮಾಡಲಾಗಿದೆ. ಪೂರ್ಣ ಪ್ರಮಾಣದ ಸಮೀಕ್ಷೆ ನಡೆಯಬೇಕಿದ್ದು, ಅಷ್ಟು ಹಣವನ್ನು ನೀಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಸಚಿವ ಅಶೋಕ ಹೇಳಿದರು.

ADVERTISEMENT

ಮುಂಗಾರಿಗೂ ಮೊದಲೇ ಮುಂಜಾಗ್ರತೆ ಕ್ರಮಗಳನ್ನು ವಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಾಲ್ಕು ತಿಂಗಳ ಹಿಂದೆಯೇ ₹ 310 ಕೋಟಿ ಬಿಡುಗಡೆ ಮಾಡಿತ್ತು. ಕೇಂದ್ರ ಸರ್ಕಾರ ಮುಂಗಡ ಹಣ ನೀಡಿದರೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದರ ಜತೆಗೆ ಬಿದ್ದು ಹೋಗಿರುವ ವಿದ್ಯುತ್‌ ಕಂಬಗಳು, ನಾಶವಾಗಿರುವ ಸೇತುವೆ ಮತ್ತು ರಸ್ತೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರನ್ನು ಇಟ್ಟಿರುವ ಸ್ಥಳಗಳನ್ನು ವೀಕ್ಷಿಸಿ ಬಂದಿದ್ದೇನೆ. ಅಲ್ಲಿನ ಪರಿಸ್ಥಿತಿ ನೋಡಿದ್ದೇನೆ. ನಿರಂತರವಾಗಿ ಪ್ರವಾಹ, ಕಡಲ್ಕೊರೆತಕ್ಕೆ ತುತ್ತಾಗುವ 10 ಜಿಲ್ಲೆಗಳಲ್ಲಿ ಕಾಯಂ ಕಾಳಜಿ ಕೇಂದ್ರಗಳನ್ನು ಒಳಗೊಂಡ ಭವನಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹ 200 ಕೋಟಿ ಬಿಡುಗಡೆ ಮಾಡಲಾಗುವುದು. ಅಲ್ಲಿ ಆಸ್ಪತ್ರೆ, ಗ್ರಂಥಾಲಯ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಅಡುಗೆ ಮನೆ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಮಾಡಲಾಗುವುದು ಎಂದು ಅಶೋಕ ಹೇಳಿದರು.

ಕಾರವಾರ ಜಿ‌ಲ್ಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದಾಗ, ಸಂತ್ರಸ್ತರಿಗೆ ಅನ್ನ–ಸಾಂಬಾರ್‌ ಬಿಟ್ಟರೆ ಬೇರೆ ಏನೂ ಕೊಡುತ್ತಿರಲಿಲ್ಲ. ಇನ್ನು ಮುಂದೆ ಕಾಳಜಿ ಕೇಂದ್ರದಲ್ಲಿ ಮೊಟ್ಟೆ, ಹಪ್ಪಳ, ಉಪ್ಪಿನ ಕಾಯಿ, ಪಲ್ಯ ನೀಡಲು ತೀರ್ಮಾನಿಸಲಾಗಿದೆ. ಸಂತ್ರಸ್ತರಿಗೆ ಉತ್ತಮ ಅಹಾರ ನೀಡಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ಕಾಳಜಿ ಕೇಂದ್ರಗಳಲ್ಲಿ ಕೋವಿಡ್‌ ಮಾರ್ಗಸೂಚಿಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ರ್‍ಯಾಪಿಡ್‌ ಪರೀಕ್ಷೆ ಮಾಡಿಸಿ, ಪಾಸಿಟಿವ್‌ ಆಗಿ ರೋಗ ಲಕ್ಷಣ ಕಂಡು ಬಂದರೆ, ಆಸ್ಪತ್ರೆಗೆ ಸೇರಿಸಬೇಕು ಎಂದೂ ಪ್ರಧಾನಿ ಸಲಹೆ ನೀಡಿದರೆಂದು ಅಶೋಕ ತಿಳಿಸಿದರು.

ಸಭೆಯ ಮುಖ್ಯಾಂಶಗಳು

1. ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ನಾಲ್ಕು ಸಾವಿರ ಕೋಟಿಗಳ ವಿಶೇಷ ಆರ್ಥಿಕ ನೆರವನ್ನು ಒದಗಿಸಲು ಕೋರಲಾಯಿತು.

2. ತಕ್ಷಣದ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಎಸ್‌‌.ಡಿ.ಆರ್‌.ಎಫ್‌ನ ಕಂತು ₹395 ಕೋಟಿ ಹಣವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಕೋರಲಾಯಿತು.

3. ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಯನ್ನು ನಿರ್ವಹಿಸಲು ಈಗಾಗಲೇ ತರಬೇತಿ ಪಡೆದ 200 ಎಸ್.ಡಿ.ಆರ್.ಎಫ್ ಸಿಬ್ಬಂದಿ , ನಾಲ್ಕು ಎನ್.ಡಿ.ಆರ್.ಎಫ್ ತಂಡಗಳು ಹಾಗೂ ನಾಲ್ಕು ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿಯಾಗಿ 4 ಎನ್.ಡಿ.ಆರ್.ಎಫ್ ತಂಡಗಳನ್ನು ಕಳುಹಿಸಲು ಕೋರಲಾಯಿತು.

4. ದೀರ್ಘಾವಧಿ ಪರಿಹಾರವಾಗಿ ಕಾವೇರಿ ಹಾಗೂ ಕೃಷ್ಣಾ ನದಿ ಪಾತ್ರಗಳಲ್ಲಿ ಹಾಗೂ ಪಶ್ಚಿಮ ಘಟ್ಟಗಳು ವ್ಯಾಪಿಸಿರುವ ನೆರೆ ರಾಜ್ಯಗಳಲ್ಲಿ ಭೂ-ಕುಸಿತಕ್ಕೆ ಸಂಬಂಧಿಸಿದಂತೆ ಮ್ಯಾಪಿಂಗ್ ಹಾಗೂ ಮುನ್ಸೂಚನಾ‌‌ ವ್ಯವಸ್ಥೆಯನ್ನು ಸ್ಥಾಪಿಸುವ ಕುರಿತು ಕೇಂದ್ರ ಭೂ ವಿಜ್ಞಾನ ಸರ್ವೇಕ್ಷಣಾ ಇಲಾಖೆ ವತಿಯಿಂದ ಅಧ್ಯಯನ ಕೈಗೊಳ್ಳುವಂತೆ ಮನವಿ ಮಾಡಲಾಯಿತು.

5. ಕೇಂದ್ರ ಜಲ ಆಯೋಗದ ವತಿಯಿಂದ ಕೃಷಾ ನದಿ ಪಾತ್ರದಲ್ಲಿ ಸಮಗ್ರ ಪ್ರವಾಹ ಪರಿಸ್ಥಿತಿ ಮುನ್ಸೂಚನೆ ವ್ಯವಸ್ಥೆಯನ್ನು ಸ್ಥಾಪಿಸಲು ಕೋರಲಾಯಿತು.

6. ಕಡಲು ಕೊರೆತ ನಿಯಂತ್ರಣಕ್ಕೆ National Cyclone Mitigation Relief Project ಯೋಜನೆಯಡಿ ಕಡಲು ಕೊರೆತವನ್ನು ಸೇರ್ಪಡೆ ಗೊಳಿಸಲು ಹಾಗೂ ಅದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಯಿತು.

7. ಪ್ರಸ್ತುತ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಬೆಳಗಾವಿ, ರಾಯಚೂರು ಸೇರಿದಂತೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ‌ ಜಿಲ್ಲೆಗಳಲ್ಲಿ ಸತತ ಮಳೆಯಿಂದಾಗಿ 56 ತಾಲ್ಲೂಕುಗಳ 885 ಗ್ರಾಮಗಳು ಹಾನಿಗೊಳಗಾಗಿದೆ. ಪ್ರಾಥಮಿಕ ವರದಿ ಪ್ರಕಾರ ಮೂರು ಸಾವಿರ ಮನೆಗಳು, ಎಂಭತ್ತು ಸಾವಿರ ಹೆಕ್ಟೇರ್ ಪ್ರದೇಶದ‌ ಕೃಷಿ‌, ತೋಟಗಾರಿಕೆ ಬೆಳೆಗಳು, 3,500 ಕಿ.ಮೀ ರಸ್ತೆ, 104 ಸಣ್ಣ ನೀರಾವರಿ ಕೆರೆಗಳು, ವಿದ್ಯುತ್ ಪರಿವರ್ತಕಗಳು, 394 ಕಟ್ಟಡಗಳಿಗೆ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿದೆ.

ಕಂದಾಯ ಸಚಿವ ಆರ್.ಅಶೋಕ್, ನಗರಾಭಿವೃದ್ಧಿ ಸಚಿವ ಬೈರತಿ‌ ಬಸವರಾಜ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.