ADVERTISEMENT

'5 ವರ್ಷಗಳಲ್ಲಿ ಮಾಡಬಾರದ್ದನ್ನೆಲ್ಲ ಮಾಡಿದೆವು'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಬಳ್ಳಾರಿ: `ಐದು ವರ್ಷದ ಅವಧಿಯಲ್ಲಿ ನಾವು ಮಾಡಬೇಕಾದ್ದುದು, ಮಾಡಬಾರದ್ದು ಎಲ್ಲವನ್ನೂ ಮಾಡಿದೆವು. ಅಭಿವೃದ್ಧಿ ಮಾಡಿದೆವು. ಭ್ರಷ್ಟಾಚಾರ ಮಾಡಿದೆವು. ಸಿಬಿಐ, ಲೋಕಾಯುಕ್ತ ತನಿಖೆಗೆ ಒಳಗಾದೆವು. ಕಡೆಗೆ ಜೈಲಿಗೂ ಹೋಗಿ ಬಂದೆವು. 60 ವರ್ಷಗಳಲ್ಲಿ ಕಾಂಗ್ರೆಸ್‌ನವರು ಅನುಭವಿಸಲಾರದ್ದನ್ನು ನಾವು ಐದೇ ವರ್ಷಗಳಲ್ಲಿ ಅನುಭವಿಸಿದೆವು' ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪಕ್ಷದ ಕಾರ್ಯಕರ್ತರನ್ನು ಅಚ್ಚರಿ ಮೂಡಿಸಿದ್ದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, `ಏನೆಲ್ಲ ಮಾಡುವುದಕ್ಕೆ ಕಾರಣವಾದವರೆಲ್ಲ ಈಗ ಪಕ್ಷ ಬಿಟ್ಟು ಹೋಗಿದ್ದು, ಪಕ್ಷ ಈಗ ಶುದ್ಧವಾಗಿದ್ದು, ಎಲ್ಲ ಅನುಭವವೂ ಆದಂತಾಗಿದೆ' ಎಂದರು.

`ಯಡಿಯೂರಪ್ಪ ಅವರ ಮಕ್ಕಳೂ ಮಾಡಬಾರದ್ದನ್ನು ಮಾಡಿ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿಕೊಂಡರು. ಹೊಸ ಪಕ್ಷವನ್ನೇ ಕಟ್ಟಿ, ನಮ್ಮಂದಿಗೆ  60 ಶಾಸಕರಿದ್ದಾರೆ ಎನ್ನುತ್ತಿದ್ದ ಯಡಿಯೂರಪ್ಪ ಜತೆ ಕೇವಲ ಬೆರಳೆಣಿಕೆಯಷ್ಟು ಶಾಸಕರು ತೆರಳಿದ್ದಾರೆ' ಎಂದು ಅವರು ಹೇಳಿದರು.

`ನಮ್ಮದು ಜಾತ್ಯತೀತ ಪಕ್ಷ, ಬಿಜೆಪಿ ಕೋಮುವಾದಿ ಪಕ್ಷ ಎಂದು ಆರೋಪಿಸುವ ಕಾಂಗ್ರೆಸ್ ಮುಖಂಡರಾದ ಡಾ. ಜಿ.ಪರಮೇಶ್ವರ್, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಶಾಮನೂರು ಶಿವಶಂಕರಪ್ಪ, ಡಿ.ಕೆ. ಶಿವಕುಮಾರ್ ಮತ್ತಿತರರು ತಮ್ಮ ಜಾತಿಯವರಿಗೇ ಟಿಕೆಟ್ ನೀಡುವಂತೆ ಒತ್ತಾಯಿಸಲು ವರಿಷ್ಠರ ಬಳಿಗೆ ತೆರಳಿದ್ದಾರೆ. ಅವರದ್ದು ಜಾತ್ಯತೀತ ಧೋರಣೆಯೋ, ಜಾತಿ ಧೋರಣೆಯೂ ಎಂಬುದು ಜನರಿಗೆ ಗೊತ್ತಾಗಿದೆ' ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.