ADVERTISEMENT

ರಾಜ್ಯದಲ್ಲಿ ವರ್ಷಧಾರೆ: 5 ಸಾವು, 431 ಮನೆಗಳಿಗೆ ಹಾನಿ

ಅಣಶಿ ಘಟ್ಟದಲ್ಲಿ ಮತ್ತೆ ಭೂಕುಸಿತ: ವಾಹನ ಸಂಚಾರ ನಿಷೇಧ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 19:31 IST
Last Updated 12 ಜುಲೈ 2022, 19:31 IST
ಕೊಡಗು ಜಿಲ್ಲೆಯ ಕೊಯನಾಡಿನಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಸಚಿವ ಆರ್‌. ಅಶೋಕ ಇದ್ದರು
ಕೊಡಗು ಜಿಲ್ಲೆಯ ಕೊಯನಾಡಿನಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಸಚಿವ ಆರ್‌. ಅಶೋಕ ಇದ್ದರು   

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರಬೆಳಗಾವಿ ಹೊರತುಪಡಿಸಿ ಉಳಿದಂತೆ ಮಳೆಯ ಬಿರುಸು ತುಸು ತಗ್ಗಿದೆ. ಆದರೆ, ಮಳೆಯಿಂದಾಗಿ 431 ಮನೆಗಳಿಗೆ ಹಾನಿಯಾಗಿದೆ. ನದಿಗಳಲ್ಲಿ ಹರಿವು ಹೆಚ್ಚಿದ್ದು, ತೀರಪ್ರದೇಶಗಳ ಜನರ ಸಂಕಷ್ಟ ಹೆಚ್ಚಾಗಿದೆ.

ಮಳೆಯಿಂದಾಗಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 80 ಮನೆಗಳು ಕುಸಿದಿದ್ದರೆ, ಕರಾವಳಿ ಭಾಗದಲ್ಲಿ 30 ಮನೆಗಳು ಭಾಗಶಃ, 4 ಮನೆಗಳು ಪೂರ್ಣ ಕುಸಿದಿವೆ. ಬೆಳಗಾವಿ ಜಿಲ್ಲೆಯಲ್ಲಿ ಹಾನಿ ಪ್ರಮಾಣ ಹೆಚ್ಚಿದ್ದು, ಸುಮಾರು 317 ಮನೆಗಳಿಗೆ ಹಾನಿಯಾಗಿದೆ.

ದಕ್ಷಿಣ ಕನ್ನಡದಲ್ಲಿ ಕೊಂಬೆ ತೆರವುಗೊಳಿಸುವಾಗ ವಿದ್ಯುತ್ ತಂತಿ ತಗುಲಿ ಮೆಸ್ಕಾಂ ನೌಕರ, ಹಳಿಯಾಳದಲ್ಲಿ ಗೋಡೆ
ಕುಸಿದು ಇಬ್ಬರು ಮೃತಪಟ್ಟಿದ್ದಾರೆ.ವಿಜಯಪುರದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಆರು ಜಾನುವಾರು ಮೃತಪಟ್ಟಿವೆ.

ADVERTISEMENT

ಉಳಿದಂತೆ, ಹೊಳೆಗೆ ಕಾರು ಬಿದ್ದು, ನೀರು ಪಾಲಾಗಿದ್ದ ಚಾಲಕ ಸೇರಿದಂತೆ ಇಬ್ಬರ ಶವಗಳು ಮಂಗಳವಾರದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರು ಬಳಿ ಬೈತಡ್ಕ ಹೊಳೆಯಲ್ಲಿ ಪತ್ತೆಯಾಗಿವೆ.

ಸಂಚಾರ ಬಂದ್: ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದಲ್ಲಿ ರಾಜ್ಯ ಹೆದ್ದಾರಿ 34ರ ಮೇಲೆ ಪದೇಪದೇ ಭೂ ಕುಸಿತವಾಗುತ್ತಿದೆ. ಹೀಗಾಗಿ, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮ, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಸೇತುವೆ ಬಳಿಯ ದತ್ತ ಮಂದಿರ, ಯಕ್ಸಂಬಾ ಸಮೀಪದ ಮುಲ್ಲಾನ್ಕಿಯ ಮನ್ಸೂರ್‌ವಲಿ ದರ್ಗಾ ಜಲಾವೃತವಾಗಿವೆ. ಜಿಲ್ಲೆಯಲ್ಲಿ ಒಟ್ಟಾರೆ 117 ಹೆಕ್ಟೇರ್‌ ಭತ್ತದ ಗದ್ದೆ ಜಲಾವೃತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಸಂತ್ರಸ್ತರಿಗಾಗಿ ಒಟ್ಟು ಎರಡು ಕಾಳಜಿ ಕೇಂದ್ರಗಳ್ನು ತೆರೆದಿದ್ದು, 84 ಜನರು ಆಶ್ರಯ ಪಡೆದಿದ್ದಾರೆ.

ಜಲಾಶಯದಿಂದ ನೀರು: ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯ ಭರ್ತಿಯಾಗಿವೆ. ಆಲಮಟ್ಟಿಯಿಂದ 1 ಲಕ್ಷ ಕ್ಯುಸೆಕ್‌, ತುಂಗಭದ್ರಾದಿಂದ 85 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.