ಬೆಳಗಾವಿ: ‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಯನ್ನು ಪಕ್ಷದ ಅಭಿಮಾನಿಗಳು, ಸಿದ್ದರಾಮಯ್ಯ ಅಭಿಮಾನಿಗಳು ಸೇರಿಕೊಂಡು ಮಾಡುತ್ತಿದ್ದಾರೆ. ಅವರ 75 ವರ್ಷದ ಬದುಕಿನಲ್ಲಿ 40 ವರ್ಷಗಳನ್ನು ರಾಜಕಾರಣದಲ್ಲಿ ಕಳೆದಿದ್ದಾರೆ. ಅವರನ್ನು ಅಭಿನಂದಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ. ಬೆಳಗಾವಿ ಜಿಲ್ಲೆಯಿಂದ ಕೂಡ 50 ಸಾವಿರ ಜನರು ಹೋಗಲಿದ್ದಾರೆ’ ಎಂದು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿಲಕ್ಷ್ಮಿ ಹೆಬ್ಬಾಳಕರ ಹೇಳಿದ್ದಾರೆ.
‘ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ. ಇದರಲ್ಲಿ ರಾಜಕೀಯ ಮಾಡಕೂಡದು. ಅವರೂ ಮಾಡಬಾರದು’ ಎಂದು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಆರ್ಎಸ್ಎಸ್ ಕಚೇರಿ ಮೇಲೆ ಅವರು ಒಮ್ಮೆಯೂ ರಾಷ್ಟ್ರಧ್ವಜ ಹಾರಿಸಿಲ್ಲ. ಇಂಥ ವಿಷಯ ಇಟ್ಟುಕೊಂಡು ನಾವು ರಾಜಕೀಯ ಮಾಡುವುದಿಲ್ಲ, ಅವರೂ ಮಾಡಬಾರದು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.
‘ರಾಷ್ಟ್ರಪತಿ ಆಯ್ಕೆ ವಿಚಾರದಲ್ಲೂ ನಾವು ರಾಜಕೀಯ ಮಾಡಿಲ್ಲ. ಬುಡಕಟ್ಟು ಸಮುದಾಯದ, ಪರಿಶಿಷ್ಟ ಮಹಿಳೆಯೊಬ್ಬರು ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಮತ ಸೆಳೆಯುವ ಉದ್ದೇಶಕ್ಕೆ ಈ ಆಯ್ಕೆ ನಡೆದಿದೆ ಎಂದು ನಾವು ಭಾವಿಸುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.