ADVERTISEMENT

ಸಿಎಎ ವಿರೋಧಿಸಿ 5000 ದೂರು

ದಾವಣಗೆರೆ: ಮುಸ್ಲಿಂ ಸಮುದಾಯದ ಹಿರಿಯ ವಕೀಲರ ಮಾರ್ಗದರ್ಶನ

ಬಾಲಕೃಷ್ಣ ಪಿ.ಎಚ್‌
Published 16 ಜನವರಿ 2020, 19:53 IST
Last Updated 16 ಜನವರಿ 2020, 19:53 IST

ದಾವಣಗೆರೆ: ಸಿಎಎ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅತಿ ಹೆಚ್ಚು ದೂರುಗಳನ್ನು ರಿಜಿಸ್ಟರ್ಡ್‌ ‍ಪೋಸ್ಟ್‌ ಮೂಲಕ ದಾವಣಗೆರೆಯಿಂದ ಕಳುಹಿಸಲಾಗಿದೆ. ಎಲ್ಲರೂ ಪ್ರತ್ಯೇಕ ವೈಯಕ್ತಿಕ ವಿಳಾಸದಲ್ಲಿ ಕಳುಹಿಸಿದ್ದಾರೆ.

‘ಜಿಲ್ಲಾ ನ್ಯಾಯಾಲಯದಲ್ಲಿ ಇರುವ ಮುಸ್ಲಿಂ ಸಮುದಾಯದ ಸುಮಾರು 20 ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ದೂರುಗಳನ್ನು ಸಿದ್ಧಪಡಿಸಲಾಗಿದೆ.ಬಳಿಕ ಸಮುದಾಯದವರಿಗೆ ನೀಡಲಾಗಿದೆ. ಅದರಲ್ಲಿ ತೀರ ಬಡತನ ಹೊಂದಿರುವ ಸುಮಾರು 2,000 ಮಂದಿಯ ದೂರುಗಳನ್ನು ಈ ವಕೀಲರ ತಂಡವೇ ರಿಜಿಸ್ಟರ್ಡ್‌ ಪೋಸ್ಟ್‌ ಮಾಡಿದೆ’ ಎಂದು ಹಿರಿಯ ವಕೀಲ ಅನೀಸ್‌ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಇದಲ್ಲದೇ ಸಮುದಾಯದ ಉಳಿದವರಿಗೂ ದೂರಿನ ಪ್ರತಿಗಳನ್ನು ನೀಡಲಾಗಿದೆ. ಅವರು ತಮ್ಮ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ವಿಳಾಸವನ್ನು ನಮೂದಿಸಿ ಸಹಿ ಹಾಕಿ ಕಳುಹಿಸಿದ್ದಾರೆ. ಈ ರೀತಿ ಸುಮಾರು 3,000 ದೂರುಗಳು ಹೋಗಿವೆ’ ಎನ್ನುತ್ತಾರೆ ಅವರು.

ADVERTISEMENT

‘ನಾನು, ಮುಷ್ತಾಕ್‌ ಮಾಲ್ವಿ, ಎಸ್‌. ಅಬ್ದುಲ್‌ ರಹೀಂ, ಸೈಯದ್‌ ಖಾದರ್‌, ರಜ್ವಿಖಾನ್‌, ಅಬ್ದುಲ್‌ ರಬ್‌, ಅಬ್ದುಲ್‌ ಸಮದ್‌, ಖಲೀಲ್‌ ಇತರರು ಸೇರಿ 20ಕ್ಕೂ ಅಧಿಕ ವಕೀಲರು ಮೊದಲು ಈ ಬಗ್ಗೆ ಸಭೆ ನಡೆಸಿದೆವು. ಆನಂತರ ಜನರಲ್ಲಿ ಜಾಗೃತಿ ಮೂಡಿಸಲು ತೀರ್ಮಾನ ಕೈಗೊಳ್ಳಲಾಯಿತು. ಅದರ ಜತೆಗೆ ದೂರು ಹೇಗೆ ಇರಬೇಕು ಎಂಬುದನ್ನೂ ಚರ್ಚಿಸಲಾಯಿತು. ಮುಷ್ತಾಕ್‌ ಮಾಲ್ವಿ, ಎಸ್‌. ಅಬ್ದುಲ್‌ ರಹೀಂ ಮಾರ್ಗದರ್ಶನದಲ್ಲಿ ದೂರು ತಯಾರು ಮಾಡಿದರು. ಪೌರತ್ವ (ತಿದ್ದುಪಡಿ) ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಆಗ ಈ ಕಾಯ್ದೆಯನ್ನು ರದ್ದುಪಡಿಸಲು ದೂರು ಸಲ್ಲಿಸಲು ಜನರು ಮುಂದೆ ಬಂದರು. ರಿಜಿಸ್ಟರ್ಡ್‌ ಪೋಸ್ಟ್‌ ವೆಚ್ಚ ಭರಿಸಲು ಸಾಧ್ಯವಿಲ್ಲದವರಿಗೆ ನಾವೇ ವೆಚ್ಚ ಭರಿಸಿ ಸಹಾಯ ಮಾಡಿದೆವು’ ಎಂದು ವಿವರ ನೀಡಿದರು.

ಸಿಎಎ ವಿರುದ್ಧ ಜನಜಾಗೃತಿ ಅನಿವಾರ್ಯ. ಅದನ್ನು ಸಮುದಾಯದ ವಕೀಲರು ಸೇರಿ ಮಾಡಿದ್ದೇವೆ. ವಕೀಲರೇ ಮೊದಲು ದೂರು ಸಲ್ಲಿಸಿದರು.

-ಅನೀಸ್‌ ಪಾಷಾ
ಹಿರಿಯ ವಕೀಲರು, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.