ಬೆಳಗಾವಿ: ಕರ್ನಾಟಕ ಹಾಗೂ ಗೋವಾ ನಡುವಿನ ಮಹದಾಯಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಗೋವಾ ಸಂಸದರೂ ಆಗಿರುವ ಕೇಂದ್ರ ಆಯುಷ್ ಸಚಿವ ಶ್ರೀಪಾದ ಯಸ್ಸೊ ನಾಯಕ ಇಲ್ಲಿ ಸೋಮವಾರ ಅಭಿಪ್ರಾಯಪಟ್ಟರು.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗೋವಾ-ಕರ್ನಾಟಕ ನೆರೆ–ಹೊರೆಯ ರಾಜ್ಯಗಳು. ಅಕ್ಕಪಕ್ಕದಲ್ಲಿ ಇರುವವರು ಒಬ್ಬರಿಗೊಬ್ಬರು ಆಗಬೇಕು. ಈ ವಿವಾದ ಇಷ್ಟೊಂದು ಮುಂದೆ ಹೋಗಬಾರದಿತ್ತು. ನಮಗೆ ಎದುರಾಗುವ ಸಂಕಷ್ಟಗಳನ್ನು ಒಟ್ಟಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದರು.
ನ್ಯಾಯಮಂಡಳಿ ಒಳಗೆ ಅಥವಾ ಹೊರಗೆ ವಿವಾದವನ್ನು ಬೇಗನೆ ಇತ್ಯರ್ಥಪಡಿಸಬೇಕು. ಕುಡಿಯುವ ನೀರಿನ ವಿಚಾರವನ್ನು ಮಾನವೀಯತೆ ಆಧಾರದ ಮೇಲೆ ಪರಿಗಣಿಸಬೇಕು ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ‘ ಈ ವಿಚಾರವಾಗಿ, ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಗೋವಾ ಹಾಗೂ ಕರ್ನಾಟಕದವರು ಬಡಿದಾಡಲಿ ಎನ್ನುವುದು ಆ ಪಕ್ಷದ ಬಯಕೆ. ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರೇ ಕರ್ನಾಟಕಕ್ಕೆ ನೀರು ಕೊಡಬೇಡಿ ಎಂದಿದ್ದರು. ಹೀಗಿರುವಾಗ ವಿವಾದ ಹೇಗೆ ಬಗೆಹರಿಯುತ್ತದೆ?’ ಎಂದು ಕೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.