ಮೈಸೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ಭೂಸ್ವಾಧೀನ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಮತ್ತೊಬ್ಬ ಮಧ್ಯವರ್ತಿ ಎ.ಎಸ್.ನಾಗಭೂಷಣಾರಾಧ್ಯ ಎಂಬುವರನ್ನು ಬಂಧಿಸಿದ್ದಾರೆ.
ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿದ್ಯಾರಣ್ಯಪುರಂ ನಿವಾಸಿಯಾಗಿದ್ದು, ಭೂವ್ಯವಹಾರ ಸಂಬಂಧ ಡೀಡ್ ಬರೆಯುತ್ತಿದ್ದರು.
ಇಲವಾಲ ಹೋಬಳಿಯ ಕಲ್ಲೂರು ನಾಗನಹಳ್ಳಿ, ಗುಂಗ್ರಾಲ್ ಛತ್ರ ಹಾಗೂ ಯಲಚನಹಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಕೆಎಚ್ಬಿ ಭೂಸ್ವಾಧೀನ ಮಾಡಿಕೊಂಡಿತ್ತು. ಸ್ವಾಧೀನಪಡಿಸಿಕೊಂಡು ಭೂಮಿಗೆ ಸರ್ಕಾರ ಮಂಜೂರು ಮಾಡಿದ ಪರಿಹಾರದ ಹಣದಲ್ಲಿ ವಂಚನೆ ನಡೆದ ಆರೋಪದಲ್ಲಿ ಡಿ.18ರಂದು 46 ಆರೋಪಿಗಳ ವಿರುದ್ಧ ಎಸಿಬಿ ದೂರು ದಾಖಲಿಸಿತ್ತು.
ಈ ಪೈಕಿ ಕೆಎಚ್ಬಿ ಇಬ್ಬರು ಎಂಜಿನಿಯರ್ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಡಿ.ಹರೀಶ್, ಸಹೋದರ ಜಿ.ಟಿ.ಯದುವರ್ ಸೇರಿ 40 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.