ಹರಪನಹಳ್ಳಿ: ಮಣ್ಣುಮುಕ್ಕ ಹಾವು ಹಾಗೂ ಗೂಬೆಯನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಆರು ಜನರ ತಂಡವನ್ನು ಹರಪನಹಳ್ಳಿ ಪೊಲೀಸರು ಮಂಗಳವಾರ ಪಟ್ಟಣದಲ್ಲಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ಎತ್ತುವ ವಾಹನ ಚಾಲಕರಾದ ಅಬ್ದುಲ್ ಖಾದರ್ (29), ಶಂಭು (28), ನಂದಿಬೇವೂರಿನ ಅಲ್ಲಾಬಕ್ಷ್ (45), ಹೂವಿನಹಡಗಲಿ ಅವಿಮಲ್ಲನಕೆರೆ ತಾಂಡ ಲೋಕ್ಯಾನಾಯ್ಕ (34), ಚಿಕ್ಕಮಗಳೂರು ಕುರುಬರಹಳ್ಳಿ ಜಯಣ್ಣ (49), ಚಿಕ್ಕಮಗಳೂರು ಮಾಚೇನಹಳ್ಳಿ ತಾಂಡಾದ ವಿರೇಂದ್ರ ನಾಯ್ಕ ಬಂಧಿತ ಆರೋಪಿಗಳು. ಅವರಿಂದ ಮಣ್ಣುಮುಕ್ಕ ಹಾವು (ಇರ್ತಲೆ ಹಾವು) ಹಾಗೂ ಒಂದು ಗೂಬೆಯನ್ನು ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ: ತಾಲ್ಲೂಕಿನ ನಂದಿಬೇವೂರು ಗ್ರಾಮದ ಕಡೆಯಿಂದ ಮಂಗಳೂರಿಗೆ ಸ್ಯಾಂಟ್ರೋ ಕಾರಿನಲ್ಲಿ ಒಂದು ಹಾವು ಹಾಗೂ ಒಂದು ಗೂಬೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಎಸ್ಪಿ ಹಾಗೂ ಸಿಪಿಐ ಮಾರ್ಗದರ್ಶನದಲ್ಲಿ ಪಿಎಸ್ಐ ಉಮೇಶಕುಮಾರ ನೇತೃತ್ವದ ತಂಡ ದಾಳಿ ನಡೆಸಿತು.
ಹೂವಿನಹಡಗಲಿ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ. ಆಗ ಕಾರು ಚಾಲಕ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಪೊಲೀಸ್ ಸಿಬ್ಬಂದಿ ಹಿಡಿದುಕೊಂಡಿದ್ದಾರೆ. ಕಾರಿನ ತಪಾಸಣೆ ನಡೆಸಿದಾಗ ಬಿಳಿ ಬಣ್ಣದ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾವು ಹಾಗೂ ಬ್ಯಾಗ್ನಲ್ಲಿ ಗೂಬೆ ಸಿಕ್ಕಿದೆ. ಅರಣ್ಯದಿಂದ ಸೆರೆ ಹಿಡಿದು ಮಾರಾಟ ಮಾಡುವ ಉದ್ದೇಶದಿಂದ ಮಂಗಳೂರು ಕಡೆ ತೆರಳುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ವನ್ಯ ಜೀವಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಲಾಗುವುದು ಎಂದು ಸಿಪಿಐ ಡಿ.ದುರುಗಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.