ಬೆಂಗಳೂರು: ಶಾಸಕ ಭವನದ ಸಮೀಪ ಕನಕದಾಸರ ಕಂಚಿನ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಸುಮಾರು 12 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ರಾಜ್ಯ ಸರ್ಕಾರ ₹ 2 ಕೋಟಿ ಬಿಡುಗಡೆ ಮಾಡಿದೆ ಎಂದು ಅವರು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ವಾಲ್ಮೀಕಿ ವನ’ದ ಮುಂಭಾಗವೇ ಕನಕದಾಸರ ಪ್ರತಿಮೆ ಸ್ಥಾಪಿಸುವುದರ ಜೊತೆಗೆ ಉದ್ಯಾನವನ್ನೂ ಸೃಷ್ಟಿಸಲಾಗುವುದು. ಇದಕ್ಕೆ ‘ಕನಕ ವನ’ ಎಂದು ಹೆಸರಿಸಲಾಗುವುದು. ಪೀಠ ಮತ್ತು ಪ್ರತಿಮೆ ಸೇರಿ ಒಟ್ಟು 22 ಅಡಿ ಆಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇನ್ನು ಒಂದೂವರೆ ತಿಂಗಳಲ್ಲಿ ಪ್ರತಿಮೆಯ ಪ್ರತಿಷ್ಠಾಪನೆ ಆಗಲಿದೆ. ಖ್ಯಾತ ಶಿಲ್ಪಿ ಗುಡಿಗಾರ್ ಅವರು ಪ್ರತಿಮೆ ತಯಾರಿಸುತ್ತಿದ್ದಾರೆ ಎಂದು ರೇವಣ್ಣ ವಿವರಿಸಿದರು.
ದಾಸ ಶ್ರೇಷ್ಠ ಪುರಂದರ ದಾಸರ ಪ್ರತಿಮೆ ಸ್ಥಾಪನೆಗೆ ಬೇಡಿಕೆ ಬಂದರೆ ಅದನ್ನು ಸ್ಥಾಪಿಸಲೂ ಸರ್ಕಾರ ಸಿದ್ಧವಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.