ಬಂಟ್ವಾಳ: ಬಂಟ್ವಾಳ ಪೇಟೆಯ ಸ್ವರ್ಣ ಉದ್ಯಮಿ ಮತ್ತು ಜವಳಿ ಉದ್ಯಮಿಯೊಬ್ಬರಿಗೆ ವಿದೇಶದಿಂದ ಹಫ್ತಾ ಬೆದರಿಕೆ ಕರೆ ಬಂದಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
‘ಬಂಟ್ವಾಳ ಪೇಟೆ ನಿವಾಸಿ ಇಲ್ಲಿನ ವಿಎನ್ಆರ್ ಚಿನ್ನಾಭರಣ ಮಳಿಗೆ ಮಾಲೀಕ ನಾಗೇಂದ್ರ ಬಿ.ಬಾಳಿಗಾ ಮತ್ತು ಕೇಲ್ದೋಡಿ ನಿವಾಸಿ, ಬಂಟ್ವಾಳ ಪೇಟೆಯ ಅಂಚನ್ ಗಾರ್ಮೆಂಟ್ಸ್ ಮಳಿಗೆ ಮಾಲೀಕ ಪ್ರಕಾಶ ಅಂಚನ್ ಎಂಬುವರಿಗೆ ಮಂಗಳವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ವಿದೇಶದಿಂದ ಹಫ್ತಾಕ್ಕಾಗಿ ಕರೆ ಬಂದಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾಗೇಂದ್ರ ಬಿ.ಬಾಳಿಗಾ ಇವರ ಮೊಬೈಲ್ಗೆ ಇಂಟರ್ನೆಟ್ ಕರೆ ಬಂದಿದ್ದು, 'ನಾನು ಕಲಿ ಯೋಗೀಶ ಮಾತನಾಡುತ್ತಿದ್ದೇನೆ. ಮುಂದಿನ ಎರಡು ದಿನಗಳೊಳಗೆ ₹50 ಲಕ್ಷ ನೀಡಬೇಕು. ಇಲ್ಲದಿದ್ದಲ್ಲಿ ಪರಿಸ್ಥಿತಿ ನೆಟ್ಟಗಿರದು' ಎಂದು ಎಚ್ಚರಿಸಲಾಗಿದೆ.
ಪ್ರಕಾಶ ಅಂಚನ್ ಇವರ ಅಂಗಡಿ ಸ್ಥಿರ ದೂರವಾಣಿಗೆ ಕರೆ ಮಾಡಿ ‘10 ದಿನಗಳ ಒಳಗೆ ₹25 ಲಕ್ಷ ನೀಡಬೇಕು. ಇಲ್ಲದಿದ್ದಲ್ಲಿ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಈ ಹಿಂದೆ ಬಂದಿರುವ ಗತಿ ನಿಮಗೂ ಬರಲಿದೆ’ ಎಂದು ಅದೇ ಹೆಸರಿನ ವ್ಯಕ್ತಿ ಎಚ್ಚರಿಸಿದ್ದು, ಈ ಕರೆಗಳ ಬಗ್ಗೆ ಪರಾಮರ್ಶಿಸಿದ ಬಳಿಕ ಮಂಗಳವಾರ ರಾತ್ರಿ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ’ ಎಂದು ತಿಳಿಸಲಾಗಿದೆ.
ಪೊಲೀಸ್ ರಕ್ಷಣೆ ಭರವಸೆ: ಈ ಬಗ್ಗೆ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರು ಇಬ್ಬರು ಉದ್ಯಮಿಗಳನ್ನು ಕೂಡಾ ಬುಧವಾರ ಮಂಗಳೂರಿಗೆ ಕರೆಸಿಕೊಂಡು ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.