ADVERTISEMENT

ಬಿಜೆಪಿ ಕಾರ್ಯಕರ್ತ ದೀಪಕ್ ಮೃತದೇಹ ಸ್ಥಳಾಂತರ: ಗ್ರಾಮಸ್ಥರು, ದೀಪಕ್ ಪೋಷಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 5:17 IST
Last Updated 4 ಜನವರಿ 2018, 5:17 IST
ಬಿಜೆಪಿ ಕಾರ್ಯಕರ್ತ ದೀಪಕ್ ಮೃತದೇಹ ಸ್ಥಳಾಂತರ: ಗ್ರಾಮಸ್ಥರು, ದೀಪಕ್ ಪೋಷಕರ ಆಕ್ರೋಶ
ಬಿಜೆಪಿ ಕಾರ್ಯಕರ್ತ ದೀಪಕ್ ಮೃತದೇಹ ಸ್ಥಳಾಂತರ: ಗ್ರಾಮಸ್ಥರು, ದೀಪಕ್ ಪೋಷಕರ ಆಕ್ರೋಶ   

ಮಂಗಳೂರು: ಬುಧವಾರ ಹತ್ಯೆಗೀಡಾದ ದೀಪಕ್ ರಾವ್ ಮೃತದೇಹವನ್ನು ಎ.ಜೆ. ಆಸ್ಪತ್ರೆಯಿಂದ, ಕಾಟಿಪಳ್ಳದ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.

ಗುರುವಾರ ಬೆಳಿಗ್ಗೆ ಶವವನ್ನು ಕಾಟಿಪಳ್ಳಕ್ಕೆ ತರುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತವಾಯಿತು. ಶವವನ್ನು ಮತ್ತೆ ಎ.ಜೆ.‌ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಅಲ್ಲಿಂದ ಗೌರವದಿಂದ ಶವಯಾತ್ರೆಗೆ ಅವಕಾಶ ಕೊಡಬೇಕು ಎಂದು ಬಜರಂಗದಳ, ವಿಶ್ವಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ ಹಾಗೂ ದುರ್ಗಾವಾಹಿನಿ ಸಂಘಟನೆಗಳ‌ ಕಾರ್ಯಕರ್ತರು, ಪೋಷಕರು ಒತ್ತಾಯಿಸಿದರು.

ಯಾರಿಗೂ ತಿಳಿಸದೇ ಪೊಲೀಸರು ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಕೂಡಲೇ ಶವಯಾತ್ರೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಆಂಬುಲೆನ್ಸ್ ನಿಂದ ಶವವನ್ನು ಕೆಳಗೆ ಇಳಿಸಲು ಬಿಡುವುದಿಲ್ಲ‌ ಎಂದು ಪಟ್ಟು ಹಿಡಿದರು. ನಗರ ಪೊಲೀಸ್ ಆಯುಕ್ತ ಟಿ.ಆರ್.‌ಸುರೇಶ್ ಸ್ಥಳದಲ್ಲಿ ಹಾಜರಿದ್ದು, ಗ್ರಾಮಸ್ಥರ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ, ಜನರು ಮಾತ್ರ ಪಟ್ಟು ಸಡಿಲಿಸುತ್ತಿಲ್ಲ.‌ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ದೀಪಕ್ ರಾವ್ ತಾಯಿ, ತಮ್ಮ, ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು, ಆಂಬುಲೆನ್ಸ್ ಎದುರು ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಟಿಪಳ್ಳದಲ್ಲಿ ಗೊಂದಲದ ಪರಿಸ್ಥಿತಿ

ಈ ಹಿಂದೆ ಶರತ್ ಮಡಿವಾಳ ಅವರ ಶವಯಾತ್ರೆ ನಡೆದ ವೇಳೆ ಬಂಟ್ವಾಳದಲ್ಲಿ ಕಲ್ಲು ತೂರಾಟ ನಡೆದಿದ್ದ ಕಾರಣ ಪೊಲೀಸರು ಎ.ಜೆ.ಆಸ್ಪತ್ರೆಯ  ಹಿಂಬಾಗಿಲಿನಿಂದ ಶವವನ್ನು ಸಾಗಿಸಿದ್ದರು.

* ಈ ಹಿಂದೆ ಮೆರವಣಿಗೆ ಆದಾಗ ಕೆಲ ಅಹಿತಕರ ಘಟನೆಗಳು ನಡೆದಿವೆ. ಅದಕ್ಕಾಗಿ ಪೊಲೀಸರು ಶವಯಾತ್ರೆಗೆ ಅನುಮತಿ ನೀಡಿರಲಿಕ್ಕಿಲ್ಲ. ಪಿಎಫ್ ಐ ಮತ್ತು ಬಜರಂಗದಳದಂತಹ ಮತೀಯ ಸಂಘಟನೆಗಳಿಂದ ಇಂತಹ ಕೃತ್ಯಗಳು ಮರುಕಳಿಸುತ್ತಿವೆ.

–ರಮಾನಾಥ ರೈ, ಸಚಿವ‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.