ಹುಬ್ಬಳ್ಳಿ: ‘ಸರ್ಕಾರವು ಪ್ರತಿಭಟಿಸುವವರಿಗಿಂತ ತನ್ನನ್ನು ಬೀಳಿಸುವವರ ಬಗ್ಗೆ ಹೆಚ್ಚು ಭಯಗೊಂಡಿರುತ್ತದೆ. ಆದ್ದರಿಂದ ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರಗಳನ್ನು ಮುಲಾಜಿಲ್ಲದೇ ಬೀಳಿಸಬೇಕು’ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಪ್ರತಿಪಾದಿಸಿದರು.
ನಗರದಲ್ಲಿ ಗುರುವಾರ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿಭಟನೆ ಮಾಡುವವರ ಬಗ್ಗೆ ಸರ್ಕಾರಕ್ಕೆ ವಿಪರೀತ ತಾತ್ಸಾರ. ಹಾಗಾಗಿಯೇ, ನೀವು ಪ್ರತಿಭಟನೆ ಮಾಡುತ್ತೀರಾ ಮಾಡಿ, ಧರಣಿ ಕುಳಿತುಕೊಳ್ಳುತ್ತೀರಾ ಕುಳಿತುಕೊಳ್ಳಿ ಎನ್ನುತ್ತದೆ. ದೇಶದ ಎಲ್ಲರೂ ಚುನಾವಣೆ ಸಂದರ್ಭದಲ್ಲಿ ಒಗ್ಗಟ್ಟಾಗುವ ಮೂಲಕ ಅಂತಹ ಉದಾಸೀನ ಸರ್ಕಾರಗಳನ್ನು ಬದಲಿಸಬೇಕು’ ಎಂದು ಕರೆ ನೀಡಿದರು.
‘ನಮ್ಮ ಹೋರಾಟದಿಂದಾಗಿ ಕೇಂದ್ರದ ಒಂದು ಸರ್ಕಾರ, ಮಹಾರಾಷ್ಟ್ರದಲ್ಲಿನ ಎರಡು ಸರ್ಕಾರಗಳು ಉರುಳಿವೆ. ಮಹಾರಾಷ್ಟ್ರದ ಆರು ಸಚಿವರು, 400 ಅಧಿಕಾರಿಗಳು ಮನೆಗೆ ಹೋಗಿದ್ದಾರೆ. ಆಂದೋಲನಗಳು ಇಂತಹ ಪರಿಣಾಮಗಳನ್ನು ಬೀರಬೇಕು’ ಎಂದರು.
‘2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಜನಲೋಕಪಾಲ್ ಕಾಯ್ದೆ ಜಾರಿಗಾಗಿ ನಡೆದ ಜನಾಂ ದೋಲನ ವಿಶ್ವದ ಗಮನ ಸೆಳೆದಿತ್ತು. ಮೈದಾನ ಸಾಲದೇ ರಸ್ತೆಯಲ್ಲಿಯೂ ಕುಳಿತ ಲಕ್ಷಾಂತರ ಜನರು ಅಹಿಂಸಾತ್ಮಕ ಹೋರಾಟ ನಡೆಸಿದರು. ಯಾರೊಬ್ಬರೂ ಕೈಗೆ ಕಲ್ಲೆತ್ತಿಕೊಳ್ಳಲಿಲ್ಲ ಎಂಬುದು ವಿಶ್ವದ ಜನತೆಗೆ ಅಚ್ಚರಿಯ ಸಂಗತಿಯಾಗಿತ್ತು. ಆ ಹೋರಾಟದಿಂದಾಗಿ ಕೇಂದ್ರ ಸರ್ಕಾರ ಉರುಳಿತು’ ಎಂದು ಸ್ಮರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.