ADVERTISEMENT

ಎಂಜಿನಿಯರ್ ಮನೆಯಲ್ಲಿ ₹ 13 ಲಕ್ಷ ಮೌಲ್ಯದ ಸೀರೆ!

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:36 IST
Last Updated 6 ಜನವರಿ 2018, 19:36 IST
ಎಂಜಿನಿಯರ್ ಮನೆಯಲ್ಲಿ ₹ 13 ಲಕ್ಷ ಮೌಲ್ಯದ ಸೀರೆ!
ಎಂಜಿನಿಯರ್ ಮನೆಯಲ್ಲಿ ₹ 13 ಲಕ್ಷ ಮೌಲ್ಯದ ಸೀರೆ!   

ಬೆಂಗಳೂರು: ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಮನೆಯಲ್ಲಿ ಬರೋಬ್ಬರಿ ₹ 13 ಲಕ್ಷ ಮೌಲ್ಯದ ಬಗೆಬಗೆಯ ಸೀರೆಗಳು ಪತ್ತೆಯಾಗಿವೆ!

ಅದಾಯ ಮೀರಿ ಆಸ್ತಿ ಗಳಿಸಿದ ಮಾಹಿತಿ ಆಧರಿಸಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಎಂಜಿನಿಯರ್ ವೆಂಕಟೇಶ್ ಮನೆ ಮತ್ತು ಕಚೇರಿ ಮೇಲೆ ಗುರುವಾರ(ಇದೇ 4ರಂದು) ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು, ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ.

ವೆಂಕಟೇಶ್‌ಗೆ ಸೇರಿದ ನಾಲ್ಕು ನಿವೇಶನ, ಒಂದು ಮನೆ ಮತ್ತು ನಾಲ್ಕು ಎಕರೆ ಜಮೀನಿಗೆ(ಫಾರಂ) ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ₹ 4 ಲಕ್ಷ ಮೌಲ್ಯದ ವಿಮಾ ಪಾಲಿಸಿ ಬಾಂಡ್‌ಗಳು, ತಲಾ ಎರಡು ಕಾರು ಮತ್ತು ಬೈಕ್, ಒಂದೂವರೆ ಕೆ.ಜಿ ಚಿನ್ನ, ಮೂರು ಕೆ.ಜಿ ಬೆಳ್ಳಿ ವಸ್ತುಗಳು, ₹ 52,000 ನಗದು ಸಿಕ್ಕಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ವಿವಿಧ ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿ ವಿವರ

* ಬಿ.ಟಿ. ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ, ಬಳ್ಳಾರಿ

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ 13 ಎಕರೆ ಜಮೀನು, ಒಂದೂವರೆ ಕೆ.ಜಿ ಚಿನ್ನ, 200 ಗ್ರಾಂ ಬೆಳ್ಳಿ ವಸ್ತುಗಳು, ₹ 4 ಲಕ್ಷ ನಗದು.

* ಎನ್‌.ಆರ್‌.ಎಂ. ನಾಗರಾಜನ್, ಕೆಪಿಟಿಸಿಎಲ್‌ ಸೂಪರಿಂಟೆಂಡೆಂಟ್‌ ಎಂಜಿನಿಯರ್, ಬೆಂಗಳೂರು

ಬೆಂಗಳೂರಿನಲ್ಲಿ ಎರಡು ಮನೆ, ಬೆಂಗಳೂರು, ರಾಯಚೂರು, ಹೊಸಪೇಟೆ ಮತ್ತು ಸಿಂಧನೂರಿನಲ್ಲಿ ಒಟ್ಟು 10 ನಿವೇಶನ, ಕಾರು, ಮೋಟಾರ್ ಬೈಕ್‌, 798 ಗ್ರಾಂ ಚಿನ್ನ, ಐದೂವರೆ ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ₹ 91,000 ನಗದು.

* ಬಿ.ಎಸ್. ಪ್ರಹ್ಲಾದ್, ಸೂಪರಿಂಟೆಂಡೆಂಟ್‌ ಎಂಜಿನಿಯರ್, ಬಿಬಿಎಂಪಿ, ಬೆಂಗಳೂರು

ಬೆಂಗಳೂರಿನಲ್ಲಿ ನಿವೇಶನ, ಎರಡು ಮನೆ, ಮೂರು ವಾಣಿಜ್ಯ ಕಟ್ಟಡ, 40 ಗುಂಟೆ ಜಮೀನು, ಚಿಕ್ಕಬಳ್ಳಾಪುರದಲ್ಲಿ ಐದು ನಿವೇಶನ, ಶಿಡ್ಲಘಟ್ಟ, ತುಮಕೂರಿನಲ್ಲಿ ಒಂದೊಂದು ನಿವೇಶನ, ಎರಡು ಕಾರು, ಬೈಕ್, 731 ಗ್ರಾಂ ಚಿನ್ನ, 865 ಗ್ರಾಂ ಬೆಳ್ಳಿ ವಸ್ತುಗಳು, ₹ 94,000 ನಗದು.

* ಆರ್‌.ವಿ. ಕಾಂತರಾಜು, ನಗರ ಯೋಜನೆ ಉಪನಿರ್ದೇಶಕ(ಬಿಡಿಎ), ಬೆಂಗಳೂರು

ಬೆಂಗಳೂರಿನಲ್ಲಿ ಐದು ಮನೆ, ರಾಮನಗರ ಜಿಲ್ಲೆಯಲ್ಲಿ ‌10 ಎಕರೆ ಕೃಷಿ ಜಮೀನು, ಕಾರು, ಬೈಕ್, ಒಂದೂವರೆ ಕೆ.ಜಿ ಚಿನ್ನ, ನಾಲ್ಕೂವರೆ ಕೆ.ಜಿ ಬೆಳ್ಳಿ ವಸ್ತುಗಳು, ₹ 37,000 ನಗದು.

* .ಎಸ್. ಬಾಲನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ನೀರಾವರಿ ನಿಗಮ, ಭದ್ರವತಿ.

ಹೊನ್ನಾವರದಲ್ಲಿ ನಾಲ್ಕು ಮನೆ, ಬೆಂಗಳೂರಿನಲ್ಲಿ ಮನೆ, ದಾವಣಗೆರೆಯ ವಿವಿಧೆಡೆ 14 ಎಕರೆ 8 ಗುಂಟೆ ಜಮೀನು, ಮೂರು ಕಾರು, ಎರಡು ಬೈಕ್, ₹ 5 ಲಕ್ಷ ಮೌಲ್ಯದ ಆಭರಣ, ₹ 4 ಲಕ್ಷ ಮೌಲ್ಯದ ಗೃಹಬಳಕೆ ವಸ್ತುಗಳು.

* ಜೆ.ಸಿ. ಜಗದೀಶಪ್ಪ, ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್, ಹೊನ್ನಾಳಿ.

ದಾವಣಗೆರೆಯಲ್ಲಿ ಐದು ನಿವೇಶನ, ಶಿವಮೊಗ್ಗದಲ್ಲಿ ಎರಡು ನಿವೇಶನ, ಬೆಂಗಳೂರಿನಲ್ಲಿ ನಿವೇಶನ, ಧಾರವಾಡದಲ್ಲಿ ಎರಡು ಫ್ಲಾಟ್, ಕಾರು, ಎರಡು ಬೈಕ್, 196 ಗ್ರಾಂ ಚಿನ್ನ, 180 ಗ್ರಾಂ ಬೆಳ್ಳಿ ವಸ್ತುಗಳು.

* ಅಶೋಕಗೌಡಪ್ಪ ಪಾಟೀಲ, ನರಗುಂದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ,
ಗದಗ ಜಿಲ್ಲೆ

ವಿವಿಧೆಡೆ ಎರಡು ನಿವೇಶನ, 815 ಗ್ರಾಂ ಚಿನ್ನ, 2 ಕೆ.ಜಿ 600 ಗ್ರಾಂ ಬೆಳ್ಳಿ ವಸ್ತುಗಳು.

* ಸೋಮಪ್ಪ ಟಿ. ಲಮಾಣಿ, ವಿಜಯಪುರ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಶಾಖಾಧೀಕ್ಷಕ

ವಿವಿಧೆಡೆ ಎರಡು ನಿವೇಶನ, 4 ಎಕರೆ 20 ಗುಂಟೆ ಜಮೀನು, ಕಾರು, ಬೈಕ್, ₹ 8 ಲಕ್ಷ ಬ್ಯಾಂಕ್ ಠೇವಣಿ.

* ನರಸಿಂಹಲು, ತೆರಿಗೆ ಮೌಲ್ಯಮಾಪಕ, ಬಿಬಿಎಂಪಿ ಸಿ.ವಿ. ರಾಮನ್‌ನಗರ ಉಪವಿಭಾಗ, ಬೆಂಗಳೂರು

ಬೆಂಗಳೂರಿನಲ್ಲಿ ಮೂರು ಮನೆ, ನಾಲ್ಕು ನಿವೇಶನ, ವಾಣಿಜ್ಯ ಕಟ್ಟಡ, ಕಾರು, ಎರಡು ಬೈಕ್‌, 300 ಗ್ರಾಂ ಚಿನ್ನ, 900 ಗ್ರಾಂ ಬೆಳ್ಳಿ ವಸ್ತುಗಳು.

* ಅಮರೇಶ ಬೆಂಚಮರಡಿ, ನಗರಸಭೆ ಸ್ಯಾನಿಟರಿ ಇನ್‌ಸ್ಪೆಕ್ಟರ್, ರಾಯಚೂರು

ವಿವಿಧೆಡೆ ಎರಡು ಫ್ಲಾಟ್, ₹ 5 ಲಕ್ಷ ಬೆಲೆಯ ಗೃಹ ಬಳಕೆ ವಸ್ತುಗಳು, ವಾಹನಗಳು, 530 ಗ್ರಾಂ ಚಿನ್ನ, 4 ಕೆ.ಜಿ 900 ಗ್ರಾಂ ಬೆಳ್ಳಿ ವಸ್ತುಗಳು, ₹ 5.67 ಲಕ್ಷ ನಗದು.

ಪಿಡಿಒ 8 ನಿವೇಶನಗಳ ಒಡತಿ

ನೆಲಮಂಗಲ ತಾಲ್ಲೂಕಿನ ವಾಜರಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರೇಖಾ, ನೆಲಮಂಗಲದಲ್ಲಿ ನಾಲ್ಕು ಅಂತಸ್ತಿನ ಮನೆ, 8 ನಿವೇಶನಕ್ಕೆ ಒಡತಿ. ಕಾರು, ಎರಡು ಬೈಕ್, ₹ 34.4 ಲಕ್ಷ ಬ್ಯಾಂಕ್ ಠೇವಣಿ, 264 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಬ್ಯಾಂಕ್ ಖಾತೆಯಲ್ಲಿ ₹ 1.7 ಲಕ್ಷ, ₹ 55,000 ನಗದು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.