ಬೆಂಗಳೂರು: ಮ್ಯಾನೇಜ್ಮೆಂಟ್ ಕೋರ್ಸ್ಗಾಗಿ ನವೆಂಬರ್ನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ)ಯಲ್ಲಿ ನಗರದ ಮೂವರು ವಿದ್ಯಾರ್ಥಿಗಳು ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಕುಮಾರ್ ರವಿ (ಶೇ 99.99), ಅಶೋಕ್ ಸುರೇಶ್ ದಾಸ್ (ಶೇ. 99.97) ಮತ್ತು ಬಿಸ್ವದೀಪ್ ಬಗ್ಚಿ (ಶೇ 99.96) ರಷ್ಟು ಅಂಕ ಪಡೆದಿದ್ದಾರೆ.
ಬಿಹಾರದ ಮುಂಗೇರ್ ಜಿಲ್ಲೆಯ ಕುಮಾರ್ ರವಿ ನಗರದ ಟೈಮ್ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದಿದ್ದರು. ನಾಗಪುರದಲ್ಲಿ ಎನ್ಐಟಿಯಲ್ಲಿ ಎಂಜಿನಿಯರಿಂಗ್ ಮುಗಿಸಿ, ಮಧ್ಯಪ್ರದೇಶದಲ್ಲಿ ಖಾಸಗಿ ಕಂಪೆನಿಯಲ್ಲಿದ್ದರು.
‘ಎಂಬಿಎ ಮಾಡಲೆಂದು ಬೆಂಗಳೂರಿಗೆ ಕೋಚಿಂಗ್ ಪಡೆಯಲು ಬಂದೆ. ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೋಚಿಂಗ್ ಚೆನ್ನಾಗಿರುವುದಿಲ್ಲ. ಮೆಟ್ರೊ ನಗರಗಳಲ್ಲಿ ಉತ್ತಮ ಕೋಚಿಂಗ್ ಸಿಗುತ್ತದೆ. ನನ್ನ ಸಹೋದರ ಬೆಂಗಳೂರಿನಲ್ಲಿ ಇದ್ದ ಕಾರಣ ಇಲ್ಲಿಗೆ ಬಂದೆ’ ಎಂದು ಪ್ರತಿಕ್ರಿಯೆ ನೀಡಿದರು.
ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬಿಎಸ್ಸಿ (ಸಂಶೋಧನೆ) ಅಂತಿಮ ವರ್ಷದ ವಿದ್ಯಾರ್ಥಿ. ‘ಅಹಮದಾಬಾದ್ ಮತ್ತು ಬೆಂಗಳೂರು ಐಐಎಂಗಳಲ್ಲಿ ಪ್ರವೇಶಕ್ಕೆ ಅವಕಾಶ ಸಿಕ್ಕಿದೆ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಇಬ್ಬರು ಚಿಕ್ಕಪ್ಪಂದಿರು ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿದ್ದಾರೆ. ಅವರಿಂದ ಪ್ರೇರಿತನಾಗಿ ಈ ಕ್ಷೇತ್ರ ಪ್ರವೇಶಿಸಲು ನಿರ್ಧರಿಸಿದ್ದೇನೆ’ ಎಂದು ಅವರು ಹೇಳಿದರು.
ಬಿಸ್ವದೀಪ್ ಬಗ್ಚಿ ನಗರದ ಖಾಸಗಿ ಕಂಪನಿಯಲ್ಲಿ ಡೆಟಾ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡನೇ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ಟಾಪರ್ ಆಗಿದ್ದಾರೆ. ‘ಬೆಂಗಳೂರು, ಅಹಮದಾಬಾದ್ ಮತ್ತು ಕೋಲ್ಕತ್ತ ಐಐಎಂಗಳಲ್ಲಿ ಅವಕಾಶ ಸಿಕ್ಕಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.