ADVERTISEMENT

ಕೋಮು ರಾಜಕಾರಣ ಎದುರಿಸುತ್ತೇವೆ: ಪ್ರಿಯಾಂಕ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 19:30 IST
Last Updated 10 ಜನವರಿ 2018, 19:30 IST

ಬೆಂಗಳೂರು: ‘ಬಿಜೆಪಿಯ ಕೋಮು ರಾಜಕಾರಣ ಎದುರಿಸುವುದರ ಜತೆಗೆ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕೆಂದು ರಾಹುಲ್‌ಗಾಂಧಿ ಹೇಳಿ ಕಳುಹಿಸಿದ್ದಾರೆ’ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.

ಪಕ್ಷದ ಸಾಮಾಜಿಕ ಜಾಲತಾಣ ವಿಭಾಗಕ್ಕೆ ‘ಜಾತ್ಯತೀತ’ ಮತ್ತು ‘ಸ್ವತಂತ್ರ’ ಮನೋಭಾವದ ವ್ಯಕ್ತಿಗಳನ್ನು ನೇಮಕ ಮಾಡಲು ಬಂದಿರುವ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು. ಇ–ಮೇಲ್‌ ಮೂಲಕ 980 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ವಿವರಿಸಿದರು.

ಕರ್ನಾಟಕದ ಚುನಾವಣೆಗೆ ಬಿಜೆಪಿಯ ತಾರಾ ಪ್ರಚಾರಕರನ್ನಾಗಿ ಯೋಗಿ ಆದಿತ್ಯನಾಥ ಅಂತಹವರನ್ನು ಕರೆಸುತ್ತಾರೆ ಎಂದರೆ ಅವರು ಯಾವ ರೀತಿಯಲ್ಲಿ ಚುನಾವಣೆ ಸೆಣಸುತ್ತಿದ್ದಾರೆ ಎಂಬುದನ್ನು ಊಹಿಸಬಹುದು ಎಂದರು.

ADVERTISEMENT

‘ಗುಜರಾತ್‌ ಮಾದರಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಗುಜರಾತ್‌ನಲ್ಲಿ ಈಚೆಗೆ ಚುನಾವಣೆ ಮುಗಿದಿದೆ. ಸರ್ಕಾರ ರಚಿಸಿದರೂ ಹಿನ್ನಡೆ ಅನುಭವಿಸಿದೆ. ನಾವು ಕರ್ನಾಟಕದ ಆಡಳಿತದ ಮಾದರಿಯನ್ನು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬಿಂಬಿಸಲು ಉದ್ದೇಶಿಸಿದ್ದೇವೆ. ಈ ಆಡಳಿತ ಎಲ್ಲರನ್ನು ಒಳಗೊಂಡ ಆಡಳಿತ ಮಾದರಿಯಾಗಿದೆ. ಈ ಮಾದರಿ ರಾಷ್ಟ್ರ ಮಟ್ಟದಲ್ಲಿ ಪ್ರತಿಬಿಂತಗೊಳ್ಳಬೇಕಾಗಿದೆ’ ಎಂದು ಅವರು ಹೇಳಿದರು.

‘ಅಹಿಂದ ವರ್ಗವನ್ನು ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರ್ಗಕ್ಕೆ ವಿವಿಧ ಯೋಜನೆಗಳನ್ನು ಪ್ರಕಟಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸಮಾಜದಲ್ಲಿ ದುರ್ಬಲ ವರ್ಗವನ್ನು ಮೇಲಕ್ಕೆತ್ತಲು ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಸರ್ಕಾರದ ಜವಾಬ್ದಾರಿಯೂ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.