ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ 24ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಇದೇ 12ರಿಂದ 14ರವರೆಗೆ ಮೂಡುಬಿದಿರೆ ಸಮೀಪದ ಪುತ್ತಿಗೆಯಲ್ಲಿ ನಡೆಯಲಿದೆ.
ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯಲಿರುವ ವಿರಾಸತ್ನ ಆರಂಭದ ದಿನ ಹಿಂದೂಸ್ತಾನಿ ಗಾಯಕರಾದ ಪಂಡಿತ್ ರಾಜನ್ ಮಿಶ್ರಾ–ಸಾಜನ್ ಮಿಶ್ರಾ ಸಹೋದರರಿಗೆ ಆಳ್ವಾಸ್ ವಿರಾಸತ್– 2018 ಪುರಸ್ಕಾರ ಮತ್ತು ವರ್ಣಚಿತ್ರ ಕಲಾವಿದೆ ಶೋಭಾ ಬ್ರೂಟಾ ಅವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಪ್ತತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
12ರಂದು ಸಂಜೆ 7ರಿಂದ ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕ ಕೆ. ಕೆ. ಮತ್ತು ತಂಡದಿಂದ ಸಂಗೀತ ರಸಸಂಜೆ, ಕೇರಳದ ಸೂರ್ಯಗಾಯತ್ರಿ ಮತ್ತು ತಂಡದಿಂದ ದೇವರ ನಾಮ ಸಂಗೀತ ಕಾರ್ಯಕ್ರಮ, ಮಂಗಳೂರಿನ ಸನಾತನ ನಾಟ್ಯಾಲಯದಿಂದ ಸನಾತನ ರಾಷ್ಟ್ರಾಮೃತ ನೃತ್ಯ ಕಾರ್ಯಕ್ರಮ ನಡೆಯಲಿದೆ. 13ರಂದು ಗಾಯಕ ಶಂಕರ ಮಹದೇಹನ್, ಎಹಸಾನ್–ಲೋಯ್, ಸಿದ್ದಾರ್ಥ್ ಮಹದೇವನ್ ತಂಡದಿಂದ ಸಂಗೀತ ಕಾರ್ಯಕ್ರಮ, 14ರಂದು ಕೈಲಾಶ್ ಖೇರ್ ಮತ್ತು ತಂಡದಿಂದ ಚಿತ್ರಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.