ಕಲಬುರ್ಗಿ: ‘ವಿಶ್ವ ಲಿಂಗಾಯತ ಪರಿಷತ್ ಸ್ಥಾಪಿಸುವುದಾಗಿ ಎಸ್.ಎಂ. ಜಾಮದಾರ ನೀಡಿರುವ ಹೇಳಿಕೆ ಅವಸರದ ನಿರ್ಣಯವಾಗಿದೆ’ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದ್ದಾರೆ.
‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಗ್ರ ವರದಿ ನೀಡುವಂತೆ ಕರ್ನಾಟಕ ಅಲ್ಪಸಂಖ್ಯಾತ ಆಯೋಗಕ್ಕೆ ಸೂಚಿಸಿದ್ದಾರೆ. ಪೂರಕ ದಾಖಲೆಗಳು ಸಹ ನಮ್ಮ ಪರವಾಗಿ ಇವೆ. ಆಯೋಗ ನೇಮಿಸಿರುವ ಸಮಿತಿಯು ದಾಖಲೆಗಳನ್ನು ಪರಿಶೀಲಿಸಿ, ನಿಷ್ಪಕ್ಷಪಾತ ವರದಿ ನೀಡುವ ಭರವಸೆ ಇದೆ’ ಎಂದು ತಿಳಿಸಿದ್ದಾರೆ.
‘ಅಖಿಲ ಭಾರತ ವೀರಶೈವ ಮಹಾಸಭೆ ಕೂಡ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಸಮಿತಿ ಫೆಬ್ರುವರಿ ಅಂತ್ಯಕ್ಕೆ ವರದಿ ನೀಡಲಿದ್ದು, ಅದಕ್ಕೂ ಮುನ್ನ ವಿಶ್ವ ಲಿಂಗಾಯತ ಪರಿಷತ್ ಸ್ಥಾಪಿಸುವುದು ಸಮಂಜಸವಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಈ ಎರಡೂ ಬಣಗಳ ನಡುವಿನ ಗೊಂದಲದ ರಾಜಕೀಯ ಲಾಭ ಪಡೆಯಲು ಯತ್ನಿಸುವ ಕೆಲ ಕುತಂತ್ರಿಗಳು ಸಮಾಜದ ವಿಭಜನೆಗೆ ಹೊಂಚು ಹಾಕುತ್ತಿದ್ದಾರೆ. ವ್ಯವಸ್ಥಿತವಾದ ಅಪಪ್ರಚಾರವನ್ನೂ ಮುಂದುವರಿಸಿದ್ದಾರೆ. ಅತೀ ಸೂಕ್ಷ್ಮವಾಗಿರುವ ಈ ವಿಷಯವನ್ನು ಜಾಮದಾರ ಅವರು ತಾಳ್ಮೆಯಿಂದ ಯೋಚಿಸಿ, ತಮ್ಮ ನಿರ್ಧಾರವನ್ನು ಮುಂದೂಡಬೇಕು’ ಎಂದು ವಿನಂತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.