ADVERTISEMENT

ಗೋವಾ ರಾಜ್ಯದ ಸಚಿವರ ಆರೋಪ ಸುಳ್ಳು: ಸಚಿವ ಎಂ.ಬಿ.ಪಾಟೀಲ

ಆಗಸ್ಟ್ ನಂತರ ಯಾವುದೇ ಕಾಮಗಾರಿ ಕೈಗೊಂಡಿಲ್ಲ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 9:27 IST
Last Updated 15 ಜನವರಿ 2018, 9:27 IST
ಗೋವಾ ರಾಜ್ಯದ ಸಚಿವರ ಆರೋಪ ಸುಳ್ಳು: ಸಚಿವ ಎಂ.ಬಿ.ಪಾಟೀಲ
ಗೋವಾ ರಾಜ್ಯದ ಸಚಿವರ ಆರೋಪ ಸುಳ್ಳು: ಸಚಿವ ಎಂ.ಬಿ.ಪಾಟೀಲ   

ಬೆಳಗಾವಿ: ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಕಳಸಾ ನಾಲಾ ಕಾಮಗಾರಿ ನಡೆಸುತ್ತಿದೆ ಎಂದ ಗೋವಾ ರಾಜ್ಯದ ಸಚಿವರ ಆರೋಪ ಸುಳ್ಳು. ಇಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಸ್ಪಷ್ಟನೆ‌ ನೀಡಿದರು. 

ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ ಎಂ.ಬಿ ಪಾಟೀಲ ಅವರು, ಗೋವಾ ಸಚಿವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಣಕುಂಬಿಯಲ್ಲಿ ಗೋವಾ ಸಚಿವರು ಪರಿಶೀಲಿಸಿರುವುದು ಹಳೆಯ ಕಾಮಗಾರಿ. ಆಗಸ್ಟ್ ನಂತರ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಮೂರನೇ ತಂಡದಿಂದ ಪರಿಶೀಲನೆಗೆ ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. 

ಕರ್ನಾಟಕದವರು ಹರಾಮಿಗಳು ಎಂದಿರುವ ಅವರೇ ಹರಾಮಿಗಳು. ಈ ಹೇಳಿಕೆ ನೀಡುವುದು ಅಂಥವರಿಂದಲೇ ಸಾಧ್ಯ. ರಾಜಕೀಯ ಮಾಡಲು ಈ ರೀತಿ ಹೇಳಿಕೆ  ನೀಡಿದ್ದಾರೆ. ಜನರ ದಿಕ್ಕು ತಪ್ಪಿಸಲು ಕರ್ನಾಟಕದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಗೋವಾ ರಾಜ್ಯದಲ್ಲಿ ತಮ್ಮ ಸರ್ಕಾರಕ್ಕೆ ಆಗುವ ಹಿನ್ನಡೆ ಮುಚ್ಚಿಕೊಳ್ಳಲು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. 

ADVERTISEMENT

ಅಲ್ಲದೇ ಭೇಟಿ ನೀಡುವ ವಿಚಾರದಲ್ಲಿ ಗೋವಾ ರಾಜ್ಯದ ನೀರಾವರಿ ಸಚಿವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಅವರ ಭೇಟಿ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಪಾಟೀಲ ಹೇಳಿದರು.

ಗೋವಾ ಸಚಿವರು ಕಳಸಾ ಕಾಮಗಾರಿ ವೀಕ್ಷಣೆಗೆ ಬಂದಿರುವುದೇ ತಪ್ಪು. ವಿವಾದ ನ್ಯಾಯಮಂಡಳಿಯಲ್ಲಿ ಇರುವುದರಿಂದ ಈ ಸ್ಥಳಕ್ಕೆ ಬಾರದಂತೆ ನಿರ್ಬಂಧ ಹೇರಬೇಕು. ಶಾಂತಿ ಕದಡುವ ಕೆಲಸವನ್ನು ಗೋವಾ ಜಲಸಂಪನ್ಮೂಲ ಸಚಿವ ಮಾಡಿದ್ದಾರೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.