ADVERTISEMENT

‘ಮಕ್ಕಳ ಸಾಹಿತ್ಯ ಅಕಾಡೆಮಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ನಾಗಮಂಗಲ ತಾಲ್ಲೂಕು ಆದಿಚುಂಚನಗಿರಿಯಲ್ಲಿ ಸೋಮವಾರ ಆರಂಭವಾದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷೆ  ಅನನ್ಯಾ ಬೆಳ್ತಂಗಡಿ ಮಾತನಾಡಿದರು
ನಾಗಮಂಗಲ ತಾಲ್ಲೂಕು ಆದಿಚುಂಚನಗಿರಿಯಲ್ಲಿ ಸೋಮವಾರ ಆರಂಭವಾದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷೆ ಅನನ್ಯಾ ಬೆಳ್ತಂಗಡಿ ಮಾತನಾಡಿದರು   

ನಾಗಮಂಗಲ: ‘ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಮಕ್ಕಳ ಸಾಹಿತ್ಯ ಅಕಾಡೆಮಿಯನ್ನು ಸರ್ಕಾರ ಸ್ಥಾಪನೆ ಮಾಡಬೇಕು’ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಅನನ್ಯಾ ಬೆಳ್ತಂಗಡಿ ಒತ್ತಾಯಿಸಿದರು.

ತಾಲ್ಲೂಕಿನ ಆದಿಚುಂಚನಗಿರಿ ಬಿಜಿಎಸ್ ಸಭಾಭವನದಲ್ಲಿ ಬಾಲಗಂಗಾ
ಧರನಾಥ ಸ್ವಾಮೀಜಿಗಳ 5ನೇ ಪುಣ್ಯಸ್ಮರಣೆ ಮತ್ತು 73ನೇ ಜಯಂತಿ ಅಂಗವಾಗಿ ಸೋಮವಾರ ಆರಂಭವಾದ ಎರಡು ದಿನಗಳ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಪ್ರಧಾನ ಭಾಷಣ ಮಾಡಿದರು.

‘ಮಕ್ಕಳು ಸಾಹಿತ್ಯಾಸಕ್ತರಾಗಬೇಕು. ಸಾಹಿತ್ಯ ಕೃಷಿ ಆರಂಭವಾಗುವುದೇ ಮನೆ, ಶಾಲೆಯಲ್ಲಿ. ಮಕ್ಕಳ ಸಾಹಿತ್ಯಾಸಕ್ತಿ ಬೆಳೆಸಲು ಅಕಾಡೆಮಿ ಸ್ಥಾಪಿಸಬೇಕು. ಅನ್ನಭಾಗ್ಯ, ಕ್ಷೀರಭಾಗ್ಯ ಕೊಟ್ಟ ಸರ್ಕಾರ, ಶಾಲೆಗಳಿಗೆ ಶಿಕ್ಷಕರ ಭಾಗ್ಯವನ್ನೂ ಕೊಡಬೇಕು ಎಂದು ನಾನು ಈ ಹಿಂದೆ ಹಾಸನದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಒತ್ತಾಯಿಸಿದ್ದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಸಂತಸ ತಂದಿದೆ’ ಎಂದರು.

ADVERTISEMENT

‘ನಾವು ಇಂದು ವಿದ್ಯಾವಂತರಾಗುತ್ತಿದ್ದೇವೆ, ಆದರೆ ವಿನಯವಂತರಾಗುತ್ತಿಲ್ಲ. ಕೇವಲ ಹಣ, ಉದ್ಯೋಗಕ್ಕಾಗಿ ವಿದ್ಯೆ ಪಡೆಯುತ್ತಿದ್ದೇವೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯು ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯ ಕಲಿಸಬೇಕು. ಮನುಷ್ಯರಾಗಿ ಹುಟ್ಟಿದರಷ್ಟೇ ಸಾಲದು, ಮನುಷ್ಯರಾಗಿ ಬಾಳುವುದನ್ನು ಕಲಿಯಬೇಕು. ದೊಡ್ಡವರು ಮಕ್ಕಳಿಗೆ ಸುಂದರ
ಪರಿಸರ ನಿರ್ಮಿಸಿಕೊಡಬೇಕು. ಕೋಮುಗಲಭೆ, ಭ್ರಷ್ಟಾಚಾರ ಆಡಳಿತದಿಂದ ದೇಶ ನಲುಗುತ್ತಿದೆ. ಭ್ರಷ್ಟಾಚಾರ ರಹಿತ ರಾಜ್ಯ ಸ್ಥಾಪಿಸಲು ಎಲ್ಲರೂ ಪಣ ತೊಡಬೇಕು’ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಕೆ.ಎಸ್.ನಿಸಾರ್ ಅಹಮದ್, ನಿಕಟ ಪೂರ್ವ ಮಕ್ಕಳ ಸಾಹಿತ್ಯ ಸಮ್ಮೇಳ
ನದ ಅಧ್ಯಕ್ಷೆ ಭಾವನಾ, ಸಮ್ಮೇಳನ ಉದ್ಘಾಟಿಸಿದ ಭದ್ರಾವತಿಯ ತನುಶ್ರೀ, ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ
ಸಿ.ಎನ್.ಅಶೋಕ್, ಜಿಲ್ಲಾ ಅಧ್ಯಕ್ಷ ಎಂ.ಎನ್.ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.