ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಮಾನ್ಯತೆ ಪಡೆದ ಶಾಲೆಗಳ ಮೀಸಲು ನಿಧಿಯ ಮೇಲೆ ಇದ್ದ ನೇರ ನಿಯಂತ್ರಣವನ್ನು ಹಿಂಪಡೆದಿದೆ.
ಇದುವರೆಗೆ ಶಾಲೆಗಳ ವ್ಯವಸ್ಥಾಪಕರು ಮತ್ತು ಸಿಬಿಎಸ್ಇ ಕಾರ್ಯದರ್ಶಿ ಹೆಸರಿನಲ್ಲಿ ಜಂಟಿ ಖಾತೆಯಲ್ಲಿ ಮೀಸಲು ನಿಧಿ ಇಡಬೇಕಿತ್ತು. ಸಿಬಿಎಸ್ಇ ಈಚೆಗೆ ಈ ನಿಯಮಕ್ಕೆ ತಿದ್ದುಪಡಿ ತಂದು, ಮೀಸಲು ನಿಧಿ ನಿರ್ವಹಣೆಗೆ ಶಾಲೆಯ ಪ್ರಾಂಶುಪಾಲ ಮತ್ತು ಶಾಲಾ ಆಡಳಿತ ಮಂಡಳಿಯ ಯಾವುದಾದರೂ ಒಬ್ಬ ಸದಸ್ಯರ ಹೆಸರಿನಲ್ಲಿ ಜಂಟಿ ಖಾತೆ ತೆರೆಯಬೇಕು ಎಂದು ಬದಲಾಯಿಸಿದೆ.
ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿದ್ದರೆ ಆಯಾ ಶಾಲೆಗಳ ವ್ಯವಸ್ಥಾಪಕ ಮತ್ತು ರಾಜ್ಯ ಶಿಕ್ಷಣ ಇಲಾಖೆಯ ನಿರ್ದೇಶಕ ಮಟ್ಟದ ಅಧಿಕಾರಿ ಹೆಸರಿನಲ್ಲಿ ಜಂಟಿ ಖಾತೆ ತೆರೆದು ಆ ಅನುದಾನ ನಿರ್ವಹಿಸಬೇಕು ಎಂಬ ತನ್ನ ಬೈಲಾದ ನಿಯಾಮವಳಿಯನ್ನೂ ತೆಗೆದು ಹಾಕಿದೆ.
ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಶಾಲೆಗಳಿಗೆ ಸಂಬಂಧಿಸಿದಂತೆ, ಆಯಾ ರಾಜ್ಯಗಳು ಅನುದಾನ ನಿರ್ವಹಣೆಗೆ ಸೂಕ್ತ ನಿಯಮಗಳನ್ನು ರಚಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಈ ರೀತಿ ಮಾರ್ಪಾಡು ಮಾಡಲು ಏನು ಕಾರಣ ಎಂದು ಸಿಬಿಎಸ್ಇ ತಿಳಿಸಿಲ್ಲ. ಮೀಸಲು ನಿಧಿಯ ನಿರ್ವಹಣೆಗೆ ಅನುಕೂಲವಾಗಲಿ ಎಂದು ಹೀಗೆ
ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.