ಬೆಂಗಳೂರು: ಹಾಸನ ಸೇರಿದಂತೆ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು (ಡಿ.ಸಿ) ವರ್ಗಾವಣೆ ಮಾಡಲಾಗಿದೆ.
ಹಾಸನ ಜಿಲ್ಲಾಧಿಕಾರಿ ರೋಹಣಿ ಸಿಂಧೂರಿ ದಾಸರಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಾಗೂ ಕಾಂಗ್ರೆಸ್ ಪ್ರಮುಖರು ಪಟ್ಟು ಹಿಡಿದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನಕ್ಕೆ ಭೇಟಿ ನೀಡಿದ್ದ ವೇಳೆ, ಮನವಿಯನ್ನೂ ಕೊಟ್ಟಿದ್ದರು.
‘ಶ್ರವಣ ಬೆಳಗೊಳದಲ್ಲಿ ನಡೆಯಲಿರುವ ಮಹಾ ಮಸ್ತಕಾಭಿಷೇಕ ಅವಧಿಯಲ್ಲಿ ಯಾವುದೇ ವ್ಯವಹಾರಕ್ಕೆ ಜಿಲ್ಲಾಧಿಕಾರಿ ಬಿಡುವುದಿಲ್ಲ ಎಂಬ ಕಾರಣಕ್ಕೆ ವರ್ಗಾವಣೆಗೆ ಒತ್ತಡ ಹೇರಲಾಗುತ್ತಿದೆ’ ಎಂದು ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಆಪಾದಿಸಿದ್ದರು.
ಎರಡೂ ಪಕ್ಷಗಳ ಮಧ್ಯದ ಕಲಹಕ್ಕೆ ಇದು ಕಾರಣವಾಗಿತ್ತು. ಮಸ್ತಕಾಭಿಷೇಕ ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ರೋಹಿಣಿ ಅವರನ್ನು ವರ್ಗಾವಣೆ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ವರ್ಗಾವಣೆ ವಿವರ: ಎಂ.ವಿ. ಜಯಂತಿ– ಅಧ್ಯಕ್ಷೆ, ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ. ವಿ.ಚೈತ್ರಾ–ಆಯುಕ್ತೆ, ಕಾರ್ಮಿಕ ಇಲಾಖೆ. ಎಸ್.ಬಿ. ಶೆಟ್ಟಣ್ಣವರ್–ಜಿಲ್ಲಾಧಿಕಾರಿ, ಹಾವೇರಿ. ಎಂ.ವಿ. ವೆಂಕಟೇಶ್– ಜಿಲ್ಲಾಧಿಕಾರಿ, ಹಾಸನ. ರೋಹಿಣಿ ಸಿಂಧೂರಿ– ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ. ಕೆ. ರಾಜೇಂದ್ರ– ಜಿಲ್ಲಾಧಿಕಾರಿ, ರಾಮನಗರ. ಬಿ.ಆರ್. ಮಮತಾ– ಆಯುಕ್ತೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.