ಜಗಳೂರು: ಇಲ್ಲಿ ಇಂದಿನಿಂದ(ಮಂಗಳವಾರ) ಆರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ‘ನೀಡುವುದರಲ್ಲಿರುವ ಸುಖ’ ವಿಷಯ ಕುರಿತು ಉಪನ್ಯಾಸ ನೀಡಿದ ಬೆಂಗಳೂರಿನ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ, ‘ನೀಡೋದ್ರಲ್ಲಿ ಪಡೆದುಕೊಳ್ಳೊ ಸುಖ ಬೇರೆಲ್ಲೂ ಇಲ್ಲ. ತಾಯಿ ನೀಡುತ್ತಾಳೆ ಆದ್ದರಿಂದ ತಾಯಿ ಸುಖ ಪಡೆಯುತ್ತಾಳೆ’ ಎಂದರು.
ತಾಯಿ ಪ್ರೀತಿ, ಮಮತೆ, ವಾತ್ಸಲ್ಯವನ್ನು ನೀಡುತ್ತಾಳೆ. ಈ ಮೂಲಕ ಸುಖ ಪಡೆಯುತ್ತಾಳೆ. ಆದ್ದರಿಂದ ವ್ಯಕ್ತಿ ಅಹಂಕಾರ ಇಲ್ಲದೆ ಕೊಡಬೇಕು ಎಂದು ಹೇಳಿದರು.
ನಗು ನಗುತ್ತಾ ಮಾತನಾಡುವುದನ್ನೇ ಮರೆತಿದ್ದೇವೆ. ನಿಮ್ಮ ಬಳಿಗೆ ಬಂದವರಿಗೆ ತುಸು ಸಮಯ ನೀಡಿ. ಸಾವಿನ ಮನೆಯಲ್ಲಿ ಸಾಂತ್ವಾನದ ಮಾತು ನೆಮ್ಮದಿ ನೀಡುತ್ತದೆ. ಆದ್ದರಿಂದ, ನೀಡುವುದಲ್ಲಿ ಇರುವ ಸುಖ ಬೇರೆಲ್ಲೂ ಸಿಗದು ವ್ಯಾಖ್ಯಾನಿಸಿದರು.
ಒಂದೊಳ್ಳೆ ಮಾತನಾಡಿ. ಒಳ್ಳೆ ಮಾತು ಎಲ್ಲಾ ಕಾಲಕ್ಕೂ ನಿಮಗೆ ನೆರವು ನೀಡುತ್ತದೆ ಎಂದು ಸಂಗತಿಗಳನ್ನು ಉದಾಹರಿಸಿದರು.
ಅಪೇಕ್ಷೆ ಇಲ್ಲದ ಪ್ರೀತಿ ಬೇಕು. ಬೇಡ ಬೇಡ ಎಂದು ಸಂಕುಚಿತ ಮನೋಭಾವ ಹೊಂದಿದ್ದೇವೆ. ಆದ್ದರಿಂದ ಕೊಡುವುದನ್ನು ರೂಢಿಸಿಕೊಳ್ಳಿ ಎಂದರು.
ಮಕ್ಕಳಿಗೆ ನೀವು ಆದರ್ಶರಾಗಿ ನಡೆದು ತೋರಿಸಿ. ಆಗ ಅವರು ನಿಮ್ಮನ್ನು ಅನುಸರಿಸುತ್ತಾರೆ. ಆ ಮೂಲಕ ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಿ. ಮಕ್ಕಳಲ್ಲಿ ಶ್ರದ್ಧೆಯನ್ನು ಬೆಳೆಸಿ. ಅವರಿಗೆ ಕೊಡಬಹುದಾದ ಕೊಡುಗೆಯಲ್ಲಿ ಅದಕ್ಕಿಂತ ದೊಡ್ಡದು ಬೇರೊಂದಿಲ್ಲ ಎಂದು ಹೇಳಿದರು.
ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದಾರೆ. ಪೀಠದ ಸಾಣೇಹಳ್ಳಿಯ ಶಾಖಾ ಮಠದ ಪೀಠಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ದರಾಮ ಸ್ವಾಮೀಜಿ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.